ಮಲಪ್ಪುರಂ: ಕೇರಳದ ಮಾನವ-ಪ್ರಾಣಿ ಸಂಘರ್ಷ ವಿಚಾರದಲ್ಲಿ ವಯನಾಡ್ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದ್ದಾರೆ.
ಕಾಡುಪ್ರಾಣಿಗಳ ದಾಳಿಗೆ ತುತ್ತಾದ, ಕ್ಷೇತ್ರದ ಜನರ ಮನೆಗಳಿಗೆ ಸೋಮವಾರ ಭೇಟಿ ನೀಡಿದ ಅವರು ಧೈರ್ಯ ತುಂಬಿದರು.
ಕಂದಕಗಳನ್ನು ಪರಿಶೀಲಿಸಿದ ಅವರು, ಆನೆಗಳು ಜನನಿಬಿಡ ಸ್ಥಳಗಳ ಮೇಲೆ ದಾಳಿ ಮಾಡದಂತೆ ನಿಯಂತ್ರಿಸಲು ಈ ಕಂದಕಗಳು ಸಾಕಾಗದು. ಕಾಡುಪ್ರಾಣಿಗಳ ಕುರಿತು ಸ್ಥಳೀಯರ ಆತಂಕವು ಸಹಜವೇ ಆಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
ಬಳಿಕ ಮಾತನಾಡಿದ ಅವರು, 'ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರದಂತೆ ತಡೆಯಲು 4 ದಶಕಗಳ ಹಿಂದೆ ನಿರ್ಮಿಸಲಾದ ಕಂದಕಗಳ ಪೈಕಿ ಹಲವು ಕಂದಕಗಳು ಮಣ್ಣಿನಿಂದ ಭರ್ತಿಯಾಗಿವೆ. ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮ ಕೈಗೊಳ್ಳದೆ ಇರುವುದೇ ಜನರ ನಂಬಿಕೆ ಕಳೆದುಕೊಳ್ಳಲು ಕಾರಣವಾಗಿದೆ. ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರದಂತೆ ಬೃಹತ್ ರಕ್ಷಣಾತ್ಮಕ ಗೋಡೆ ನಿರ್ಮಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕಗಳಲ್ಲಿ ತುಂಬಿದ ಮಣ್ಣನ್ನು ತೆಗೆಸಬೇಕು' ಎಂದು ಹೇಳಿದರು.