ಮುಂಬೈ: 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಆಡಿದ ಅಶ್ಲೀಲ ಮಾತುಗಳ ಸಂಬಂಧ ತನಿಖೆಗೆ ಹಾಜರಾಗುವಂತೆ ಪಾಡ್ಕಾಸ್ಟರ್ ರಣವೀರ್ ಅಲಹಾಬಾದಿಯಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು. ಆದರೆ, 'ಮಾಧ್ಯಮಗಳ ಬಗ್ಗೆ ಭಯವಾಗುತ್ತದೆ' ಎಂಬ ಕಾರಣ ನೀಡಿ ರಣವೀರ್ ಅವರು ತನಿಖೆಗೆ ಗುರುವಾರ ಹಾಜರಾಗಲಿಲ್ಲ.
ನೀವು ತನಿಖೆಯಿಂದ ತಪ್ಪಿಸಕೊಳ್ಳಲು ಸಾಧ್ಯವಿಲ್ಲ. ಶುಕ್ರವಾರ ತನಿಖೆಗೆ ಹಾಜರಾಗಿ' ಎಂದು ಪೊಲೀಸರು ರಣವೀರ್ ಅವರಿಗೆ ತಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಳಿದ ಏಳು ಮಂದಿಯ ಹೇಳಿಕೆಯನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಫೆ. 18ಕ್ಕೆ ತನಿಖೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಸಮಯ್ ರೈನಾ ಅವರಿಗೆ ಸೂಚಿಸಿದ್ದಾರೆ. ಇನ್ನು ಫೆ.18ಕ್ಕೆ ಹಾಜರಾಗಿ ಎಂದು ಮಹಾರಾಷ್ಟ್ರ ಸೈಬರ್ ವಿಭಾಗದವರೂ ಸಮಯ್ಗೆ ಸಮನ್ಸ್ ನೀಡಿದ್ದಾರೆ. ಸಮಯ್ ಅವರು ಸದ್ಯ ಅಮೆರಿಕದಲ್ಲಿದ್ದಾರೆ.
ಅಸ್ಸಾಂನಲ್ಲಿಯೂ ಕಾರ್ಯಕ್ರಮದ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಮಹಾರಾಷ್ಟ್ರ ಸೈಬರ್ ವಿಭಾದ ಅಧಿಕಾರಿಗಳನ್ನು ಗುರುವಾರ ಅಸ್ಸಾಂ ಪೊಲೀಸರು ಭೇಟಿಯಾಗಿದ್ದಾರೆ.
ರಣವೀರ್ ಅವರ ಅಶ್ಲೀಲ ಹೇಳಿಕೆ ಹಿನ್ನೆಲೆಯಲ್ಲಿ ಜಾಲತಾಣ ವೇದಿಕೆಗಳಲ್ಲಿನ ವಿವಾದಾತ್ಮಕ ಕಂಟೆಂಟ್ಗಳನ್ನು ತಡೆಯಲು ಈಗಾಗಲೇ ಇರುವ ಕಾನೂನುಗಳಿಗೆ ತಿದ್ದುಪಡಿಗಳು ಬೇಕಾಗಿವೆಯೇ ಎಂಬುದನ್ನು ಪರಿಶೀಲಿಸಿ ಫೆ.17ರ ಒಳಗೆ ವರದಿ ನೀಡುವಂತೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಯು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಗುರುವಾರ ಸೂಚಿಸಿದೆ.