ಇಂಫಾಲ್: ಎನ್. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ನಂತರ ಮಣಿಪುರದ ರಾಜಕೀಯದಲ್ಲಿ ಉಂಟಾಗಿರುವ ನಾಯಕತ್ವ ಬಿಕ್ಕಟ್ಟು ಮುಂದುವರಿದಿದ್ದು, ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಅವರು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚಿಸಿದರು. ಆದರೆ, ಚರ್ಚೆಯ ವಿವರಗಳು ಗೊತ್ತಾಗಿಲ್ಲ.
ಪಾತ್ರಾ ಅವರು ಬಿಜೆಪಿಯ ಈಶಾನ್ಯ ರಾಜ್ಯಗಳ ಉಸ್ತುವಾರಿಯೂ ಹೌದು. ಪಾತ್ರಾ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಮಂಗಳವಾರವೂ ಭೇಟಿ ಮಾಡಿತ್ತು.
ಮಣಿಪುರದಲ್ಲಿ ಹೊಸದಾಗಿ ಸರ್ಕಾರ ರಚಿಸಲು ಯಾರೂ ಹಕ್ಕು ಮಂಡಿಸುತ್ತಿಲ್ಲವಾದ ಕಾರಣ, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿ ಆರು ತಿಂಗಳಿಗೆ ಒಮ್ಮೆ ರಾಜ್ಯಪಾಲರು ವಿಧಾನಭೆಯ ಅಧಿವೇಶನವನ್ನು ಕರೆಯಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆರು ತಿಂಗಳ ಅವಧಿಯನ್ನು ವಿಸ್ತರಿಸಲು ಅವಕಾಶ ಇಲ್ಲ. ಆರು ತಿಂಗಳು ಪೂರ್ಣಗೊಂಡ ನಂತರದಲ್ಲಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ, ಸಂವಿಧಾನದ 356ನೆಯ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಆಯ್ಕೆ ಮಾತ್ರವೇ ಉಳಿದಿರುತ್ತದೆ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಅರುಣಭ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಮಣಿಪುರದಲ್ಲಿ ಫೆಬ್ರುವರಿ 10ರಿಂದ ವಿಧಾನಸಭೆಯ ಅಧಿವೇಶನ ಆರಂಭವಾಗಬೇಕಿತ್ತು. ಆದರೆ ಸಿಂಗ್ ರಾಜೀನಾಮೆಯ ನಂತರ ರಾಜ್ಯಪಾಲರು ಅಧಿವೇಶನವನ್ನು ರದ್ದುಪಡಿಸಿದ್ದಾರೆ.