ಲಖನೌ: 'ಮಹಾಕುಂಭ ಮೇಳಕ್ಕೆ ಭೇಟಿ ನೀಡಲು ಬಯಸಿರುವ ಜನರಿಗೆ ಅನುಕೂಲ ಆಗುವಂತೆ ಮೇಳದ ಅವಧಿಯನ್ನು ವಿಸ್ತರಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಮಹಾಕುಂಭ ಮೇಳದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದರಿಂದಾಗಿ ರಾಜ್ಯದ ವರ್ಚಸ್ಸಿಗೆ ವಿಶ್ವಮಟ್ಟದಲ್ಲಿ ಧಕ್ಕೆಯಾಗಿದೆ ಎಂದು ಟೀಕಿಸಿದರು.
ಮಹಾಕುಂಭ ಮೇಳವು ಜನವರಿ 14ರಂದು ಆರಂಭವಾಗಿದ್ದು, ಮಹಾಶಿವರಾತ್ರಿ ದಿನವಾದ ಫೆಬ್ರುವರಿ 26ರಂದು ಮುಗಿಯಲಿದೆ.
ಸಂಚಾರ, ಜನ ದಟ್ಟಣೆ ನಿರ್ವಹಣೆಯಲ್ಲಿ ಲೋಪದಿಂದಾಗಿ ಪ್ರಯಾಗರಾಜ್ ಜಿಲ್ಲೆಯ ಸಾವಿರಾರು ನಿವಾಸಿಗಳಿಗೂ ಪುಣ್ಯಸ್ನಾನ ಮಾಡಲು ಆಗಿಲ್ಲ ಎಂದು ಅಭಿಪ್ರಾಯಪಟ್ಟರು.
ಡಿಜಿಟಲ್ ಕೇಂದ್ರದಿಂದಾಗಿ ತಮ್ಮವರ ಮರಳಿ ಸೇರಿದ 20 ಸಾವಿರ ಮಂದಿ: ಕುಂಭಮೇಳದಲ್ಲಿ ತಮ್ಮವರಿಂದ ದೂರವಾಗಿ ಕಳೆದುಹೋದವರನ್ನು ಮತ್ತೆ ಸೇರಿಸಲು ಅನುವು ಮಾಡಿಕೊಡಲು ರೂಪಿಸಲಾದ ಡಿಜಿಟಲ್ ಕೇಂದ್ರದಿಂದಾಗಿ 20 ಸಾವಿರ ಮಂದಿಗೆ ಅನುಕೂಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಣ್ಯಸ್ನಾನ ಮಾಡುವ ದಿನಗಳಲ್ಲಿ ಅತಿ ಹೆಚ್ಚು ಜನಸಂದಣಿ ಇರುವಾಗ ತಮ್ಮವರಿಂದ ಕಳೆದುಹೋಗುವವರನ್ನು ಪತ್ತೆ ಮಾಡುವುದು ಈ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದಿದ್ದಾರೆ.