ನವದೆಹಲಿ: ದೆಹಲಿಯ ಜಾಮಿಯಾ ನಗರದಲ್ಲಿ ಪೊಲೀಸರ ಮೇಲೆ ನಡೆದಿದ್ದ ದಾಳಿಯ ನೇತೃತ್ವ ವಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಇಂದು (ಗುರುವಾರ) ನಿರೀಕ್ಷಣಾ ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಮೋರೆ ಹೋಗಿದ್ದಾರೆ.
ತನಿಖೆಗೂ ಮೊದಲು ಬಂಧನದಿಂದ ರಕ್ಷಣೆ ಕೋರಿ ವಿಶೇಷ ನ್ಯಾಯಾಧೀಶ ಜೀತೇಂದ್ರ ಸಿಂಗ್ ಅವರಿಗೆ ಖಾನ್ ಅರ್ಜಿ ಸಲ್ಲಿಸಿದ್ದು, ತನ್ನ ವಿರುದ್ಧ ಹೊರಿಸಲಾದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ದೆಹಲಿಯ ಜಾಮಿಯಾ ನಗರದಲ್ಲಿ ಪೊಲೀಸರ ಮೇಲೆ ನಡೆದಿದ್ದ ದಾಳಿಯ ನೇತೃತ್ವ ವಹಿಸಿದ ಆರೋಪದ ಮೇಲೆ ದೆಹಲಿಯ ಓಖ್ಲಾದ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅಮಾನತುಲ್ಲಾ ಖಾನ್ ನೇತೃತ್ವದ ಗುಂಪೊಂದು ಕೊಲೆ ಯತ್ನ ಪ್ರಕರಣದ ಅಪರಾಧಿಗೆ ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.