ನವದೆಹಲಿ: ಮಹಾ ಕುಂಭ ನಡೆಯುತ್ತಿರುವ ಪ್ರಯಾಗರಾಜ್ನ ವಿವಿಧ ಸ್ಥಳಗಳಲ್ಲಿನ ನೀರಿನಲ್ಲಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣ ಅಧಿಕ ಇದೆ ಎಂಬ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ಕುರಿತು ಭಿನ್ನಾಭಿಪ್ರಾಯವೇಕೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು (ಯುಪಿಪಿಸಿಬಿ) ರಾಷ್ಟ್ರೀಯ ಹಸಿರು ಪೀಠ ಬುಧವಾರ ಪ್ರಶ್ನಿಸಿದೆ.
ಗಂಗಾ ಮತ್ತು ಯಮುನಾ ನದಿಗಳಿಗೆ ಪ್ರಯಾಗರಾಜ್ನಲ್ಲಿ ಒಳಚರಂಡಿ ತ್ಯಾಜ್ಯ ಸೇರುವುದನ್ನು ತಡೆಯುವ ಕುರಿತು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಎನ್ಜಿಟಿ ಈ ಪ್ರಶ್ನೆ ಮುಂದಿಟ್ಟಿದೆ.
ಎನ್ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ ಶ್ರೀವಾಸ್ತವ, ನ್ಯಾಯಿಕ ಸದಸ್ಯ ನ್ಯಾಯಮೂರ್ತಿ ಸುಧೀರ್ ಅಗರವಾಲ್ ಹಾಗೂ ತಜ್ಞ ಸದಸ್ಯ ಎ.ಸೆಂಥಿಲ್ ವೇಲ್ ಅವರು ಇದ್ದ ಪೀಠವು, ಅರ್ಜಿ ವಿಚಾರಣೆ ನಡೆಸಿ ಯುಪಿಪಿಸಿಬಿಯನ್ನು ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ,'ಯಾವ ಸ್ಥಳಗಳಲ್ಲಿ ನದಿ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಸಿಪಿಸಿಬಿ ಮಾಹಿತಿ ನೀಡಿಲ್ಲ' ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರು ಪೀಠಕ್ಕೆ ತಿಳಿಸಿದರು.
'ಹಾಗಾದರೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯನ್ನು ಯುಪಿಪಿಸಿಬಿ ಒಪ್ಪುವುದಿಲ್ಲವೇ? ಎಂದ ಪೀಠ, 'ಮಾದರಿಗಳನ್ನು ಸಂಗ್ರಹಿಸುವ ಮುನ್ನ ಸಿಪಿಸಿಬಿ ನಿಮಗೆ ಮಾಹಿತಿ ನೀಡಬೇಕು ಎಂಬ ನಿಯಮವಿಲ್ಲ' ಎಂದೂ ಹೇಳಿತು.
ನದಿ ನೀರಿನ ಗುಣಮಟ್ಟ ಕಾಪಾಡುವ ಕುರಿತು ಕೈಗೊಂಡಿರುವ ಕ್ರಮಗಳ ವಿವರಗಳನ್ನು ಒಳಗೊಂಡ ವರದಿಯನ್ನು ಫೆ.18ರಂದು ಸಲ್ಲಿಸಲಾಗಿದೆ ಎಂದು ಗರಿಮಾ ಪ್ರಸಾದ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಈ ವರದಿಯಲ್ಲಿ, ಫೀಕಲ್ ಕೋಲಿಫಾರ್ಮ್ ಮಟ್ಟ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಅಲ್ಲದೇ, ಜನವರಿ 12ಕ್ಕೂ ಮೊದಲಿನ ವಸ್ತುಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ಮಾತ್ರ ಒಳಗೊಂಡಿದೆ' ಎಂದು ಹೇಳಿತು.
ಆಗ, 'ಈ ಕುರಿತು ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ವಾರದ ಒಳಗಾಗಿ ಹೊಸ ವರದಿಯನ್ನು ಸಲ್ಲಿಸಲಾಗುವುದು' ಎಂದು ಗರಿಮಾ ಪ್ರಸಾದ್, ಪೀಠಕ್ಕೆ ತಿಳಿಸಿದರು.
ಅಡ್ವೊಕೇಟ್ ಸೌರಭ್ ತಿವಾರಿ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದಾರೆ.