ಲಖನೌ: ಉತ್ತರ ಪ್ರದೇಶ ಜೈಲುಗಳಲ್ಲಿರುವ ಕೈದಿಗಳು ಶುಕ್ರವಾರ ಸಂಗಮದ ನೀರಿನಲ್ಲಿ ಪುಣ್ಯ ಸ್ನಾನ ಮಾಡಿದರು.
ಸಚಿವ ದಾರಾ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಉತ್ತರಪ್ರದೇಶ ಜೈಲು ಆಡಳಿತ ಕೈದಿಗಳಿಗೆ ಸಂಗಮದ ನೀರಿನ ವ್ಯವಸ್ಥೆ ಮಾಡಿತ್ತು.
ಈ ಕುರಿತು ಮಾತನಾಡಿರುವ ಚೌಹಾಣ್, 'ಜಗತ್ತಿನ ವಿವಿಧ ಪ್ರದೇಶಗಳಿಂದ ಜನರು ಸಂಗಮಕ್ಕೆ ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ಆದರೆ ಜೈಲಿನಲ್ಲಿರುವವರಿಗೆ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ಸಂಗಮದ ಪವಿತ್ರ ನೀರು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ' ಎಂದರು.
'ಸಂಗಮದಿಂದ ಪವಿತ್ರ ನೀರನ್ನು ತಂದು ಸ್ನಾನ ಮಾಡಲು ಬಳಸುವ ನೀರಿನ ಟ್ಯಾಂಕ್ಗಳಿಗೆ ಹಾಕಲಾಗಿದೆ. ಕೈದಿಗಳು ಪ್ರಾರ್ಥನೆಯೊಂದಿಗೆ ಆ ನೀರಿನಿಂದ ಸ್ನಾನ ಮಾಡುತ್ತಿದ್ದಾರೆ. ಸಚಿವರ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಸಲಾಗಿದೆ' ಎಂದು ಜೈಲುಗಳ ಮಹಾನಿರ್ದೇಶಕ ಪಿ.ವಿ. ರಾಮಶಾಸ್ತ್ರಿ ಮಾಹಿತಿ ನೀಡಿದ್ದಾರೆ.
ಏಳು ಕೇಂದ್ರ ಕಾರಾಗ್ರಹ ಸೇರಿ ರಾಜ್ಯದಲ್ಲಿ ಒಟ್ಟು 75 ಜೈಲುಗಳಿದ್ದು, 90 ಸಾವಿರ ಕೈದಿಗಳಿದ್ದಾರೆ ಎಂದು ಆಡಳಿತ ತಿಳಿಸಿದೆ.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಫೆ.16ರವರೆಗೆ ಮಹಾಕುಂಭ ಮೇಳ ನಡೆಯಲಿದೆ.