ನವದೆಹಲಿ: 'ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಬೇಕು ಎಂಬುದನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಕುಳಿತು ನಿರ್ಧರಿಸಬೇಕು. ಆ ಮೂಲಕ ಮೈತ್ರಿಯಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಬೇಕು' ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಸಲಹೆ ನೀಡಿದ್ದಾರೆ.
ಇತ್ತೀಚಿನ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೀನಾಯವಾಗಿ ಸೋಲನುಭವಿಸುತ್ತಿರುವ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 'ಇಂಡಿಯಾ ಮೈತ್ರಿಕೂಟದಲ್ಲಿನ ಗೊಂದಲವು ಬಿಜೆಪಿಗೆ ಲಾಭ ಮಾಡಿಕೊಡುತ್ತಿದೆ' ಎಂದರು.
ಕಾಂಗ್ರೆಸ್ ಪಕ್ಷವು ಒಮ್ಮತದಿಂದ ಎಲ್ಲರನ್ನು ಮುನ್ನೆಡೆಸಲು ಪ್ರಯತ್ನಿಸುತ್ತದೆ. ಇದೇ ಕೆಲವೊಮ್ಮೆ ಕಾಂಗ್ರೆಸ್ಗೆ ಮುಳುವಾಗುತ್ತದೆ. ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ನಿರೀಕ್ಷಿಸಿದ ಸ್ಥಾನಗಳನ್ನು ಗೆಲ್ಲದಿದ್ದಾಗ 'ಕಾಂಗ್ರೆಸ್ನಿಂದಲೇ ನಾವು ಚುನಾವಣೆಯಲ್ಲಿ ಸೋಲಬೇಕಾಯಿತು' ಎಂದು ಆರ್ಜೆಡಿ ಹೇಳಿತ್ತು' ಎಂದು ಹೇಳಿದರು.
'ಕಾಂಗ್ರೆಸ್ ವಿರುದ್ಧ ಗೋವಾ, ಹರಿಯಾಣ, ಗುಜರಾತ್ ಮತ್ತು ಇತರ ಕಡೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ ಅರವಿಂದ ಕೇಜ್ರಿವಾಲ್ ಅವರಿಗೂ ಇದೇ ಪ್ರಶ್ನೆ ಕೇಳಬೇಕಿತ್ತು' ಎಂದು ಹೇಳಿದರು.
'ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಯಶಸ್ಸಿಯಾಗಿತ್ತು. ತಮಿಳುನಾಡಿನಲ್ಲಿಯೂ ಇದು ಯಶ ಕಂಡಿತ್ತು. ಹೀಗಾಗಿ ಹೇಗೆ ಮುಂದುವರಿಯಬೇಕು ಎಂಬುವುದನ್ನು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಚರ್ಚಿಸಬೇಕು' ಎಂದರು.
'ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಎಲ್ಲರೂ ಸೇರಿ ನಿರ್ಧರಿಸಬೇಕು. ಇಲ್ಲವಾದರೆ ಬಿಜೆಪಿ ಇದರ ಲಾಭ ಪಡೆದುಕೊಳ್ಳುತ್ತದೆ' ಎಂದು ಹೇಳಿದರು.