ನವದೆಹಲಿ: ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು (ಎಎಪಿಯನ್ನು) ರಾಷ್ಟ್ರ ರಾಜಧಾನಿಯ ಆಡಳಿತದಿಂದ ಹೊರದಬ್ಬಿರುವ ಬಿಜೆಪಿ, ಎರಡೂವರೆ ದಶಕದ ಬಳಿಕ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ.ದೆಹಲಿ ವಿಧಾನಸಭೆಯಲ್ಲಿ 70 ಸ್ಥಾನಗಳಿವೆ.
2015ರಲ್ಲಿ ಮೂರು ಮತ್ತು 2020ರಲ್ಲಿ ಎಂಟು ಸ್ಥಾನಗಳಲ್ಲಷ್ಟೇ ಗೆದ್ದಿದ್ದ ಬಿಜೆಪಿ ಈ ಭಾರಿ, 48 ಕ್ಷೇತ್ರಗಳನ್ನು ಜಯಿಸಿ ಭಾರಿ ಬಹುಮತ ಸಾಧಿಸಿದೆ.
ಈ ಗೆಲುವನ್ನು ಬಿಜೆಪಿ ರಾಷ್ಟ್ರದಾದ್ಯಂತ ಸಂಭ್ರಮಿಸುತ್ತಿದೆಯಾದರೂ, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬದು ಇನ್ನೂ ಖಚಿತವಾಗಿಲ್ಲ. ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ, ಅಂತಿಮ ತೀರ್ಮಾನ ಮಾಡುವುದು ಕೇಸರಿ ಪಕ್ಷದ ಹೈಕಮಾಂಡ್ ಅಷ್ಟೇ.
ಸದ್ಯ ಮುನ್ನಲೆಗೆ ಬಂದಿರುವ ನಾಯಕರ ಇವರೇ..
ಎಎಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ನವದೆಹಲಿ ಕ್ಷೇತ್ರದಲ್ಲಿ 4,089 ಮತಗಳ ಅಂತರದಿಂದ ಮಣಿಸಿರುವ ಪರ್ವೇಶ್ ವರ್ಮಾ ಹೆಸರು ಮುಂಚೂಣಿಯಲ್ಲಿದೆ.
2014-2024ರವರೆಗೆ ಸಂಸದರಾಗಿದ್ದ ಪರ್ವೇಶ್, ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ.
ಜನಕಪುರಿ ಕ್ಷೇತ್ರದಲ್ಲಿ 18,766 ಮತಗಳಿಂದ ಗೆಲುವು ಸಾಧಿಸಿರುವ ಆಶಿಷ್ ಸೂದ್, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ.
ಸದ್ಯ, ಗೋವಾದಲ್ಲಿ ಬಿಜೆಪಿ ಉಸ್ತುವಾರಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಹ ಉಸ್ತುವಾರಿಯಾಗಿರುವುದು ಪ್ಲಸ್ ಪಾಯಿಂಟ್.
ಸದ್ಯ ಅಸ್ಸಾಂನಲ್ಲಿ ಬಿಜೆಪಿ ಉಸ್ತುವಾರಿ ಆಗಿರುವ ಪವನ್ ಶರ್ಮಾ, ದೆಹಲಿಯಲ್ಲಿ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಇವರು ಉತ್ತಮ್ ನಗರ ಕ್ಷೇತ್ರದಲ್ಲಿ 29,740 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ದೆಹಲಿಯ ಕಳೆದ ವಿಧಾನಸಭೆ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವೀರೇಂದ್ರ ಗುಪ್ತಾ, ರೋಹಿಣಿ ಕ್ಷೇತ್ರದ 'ಹ್ಯಾಟ್ರಿಕ್' ಶಾಸಕ. ಇಲ್ಲಿ 37,816 ಮತಗಳಿಂದ ಜಯ ಗಳಿಸಿದ್ದಾರೆ.
ನವದೆಹಲಿ ನಗರ ಪಾಲಿಕೆಯ ಮಾಜಿ ಉಪಾಧ್ಯಕ್ಷ ಸತೀಶ್ ಉಪಾದ್ಯಾಯ, ಆರ್ಎಸ್ಎಸ್ ನಾಯಕತ್ವದೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿಯ ಸಹ ಉಸ್ತುವಾರಿ ಆಗಿರುವ ಸತೀಶ್, ಮಾಳವಿಯಾ ನಗರ ಕ್ಷೇತ್ರದಲ್ಲಿ ಎಎಪಿಯ ಪ್ರಮುಖ ನಾಯಕ ಸೋಮನಾಥ್ ಭಾರ್ತಿ ಎದುರು 2,131 ಮತಗಳ ಅಂತರದಿಂದ ಗೆದ್ದಿದ್ದಾರೆ.
ಶಾಲಿಮರ್ ಬಾಗ್ ಕ್ಷೇತ್ರದಲ್ಲಿ 29,000ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ರೇಖಾ ಗುಪ್ತಾ.
ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ರೇಖಾ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ದೆಹಲಿ ಘಟಕದ ಪ್ರಧಾನಿ ಕಾರ್ಯದರ್ಶಿಯೂ ಹೌದು.
ಶಿಖಾ ರಾಯ್ ಅವರು, ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಎಎಪಿಯ ಪ್ರಮುಖ ನಾಯಕ ಸೌರಭ್ ಭಾರದ್ವಾಜ್ ಎದುರು 3,188 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಲು ನಿರ್ಧರಿಸಿದರೆ, ಶಿಖಾಗೆ ಅದೃಷ್ಟ ಒಲಿಯಬಹುದು ಎನ್ನಲಾಗುತ್ತಿದೆ.