ನವದೆಹಲಿ: ಸಮಯ್ ರೈನಾ ಅವರು ನಡೆಸಿಕೊಡುವ 'ಇಂಡಿಯಾ ಗಾಟ್ ಲೆಟೆಂಟ್' ರಿಯಾಲಿಟಿ ಶೋನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸುವಂತೆ ಕೋರಿ ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇಲಾಹಾಬಾದಿಯಾ ಪರ ವಾದ ಮಂಡಿಸಿದ ವಕೀಲ ಅಭಿನವ್ ಚಂದ್ರಚೂಡ್ ಅವರು, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ತುರ್ತಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 32ನೇ ವಿಧಿ ಅನ್ವಯ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದಾಗಿ ವಕೀಲರು ತಿಳಿಸಿದ್ದಾರೆ. ಎರಡು-ಮೂರು ದಿನಗಳಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಸಮಯ್ ರೈನಾ ಕಾರ್ಯಕ್ರಮದ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಇಲಾಹಾಬಾದಿಯಾ ಕ್ಷಮೆ ಕೋರಿದ್ದಾರೆ. ಆದಾಗ್ಯೂ, ಅವರ ವಿರುದ್ಧ ಮತ್ತು ಕಾರ್ಯಕ್ರಮದಲ್ಲಿದ್ದ ಇತರರ ವಿರುದ್ಧ ಅಸ್ಸಾಂ ಹಾಗೂ ಮುಂಬೈನಲ್ಲಿ ಹಲವು ಎಫ್ಐಆರ್ಗಳು ದಾಖಲಾಗಿವೆ.
ಹೀಗಾಗಿ, ಎಫ್ಐಆರ್ಗಳನ್ನು ಒಟ್ಟಿಗೆ ಪರಿಗಣಿಸುವಂತೆ ಹಾಗೂ ಬಲವಂತದ ಕ್ರಮದಿಂದ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.