ಪ್ರಯಾಗರಾಜ್: ಮಹಾ ಕುಂಭ ಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಇಂದು ಘಟನಾ ಸ್ಥಳಕ್ಕೆ(ಸಂಗಮ) ಭೇಟಿ ನೀಡಿದೆ.
ಸಮಿತಿಯ ಸದಸ್ಯರಿಗೆ ಮೇಲಾಧಿಕಾರಿಗಳಾದ ವಿಜಯ್ ಕಿರಣ್ ಆನಂದ್, ಡಿಐಜಿ ವೈಭವ್ ಕೃಷ್ಣ ಮತ್ತು ಎಸ್ಎಸ್ಪಿ ರಾಜೇಶ್ ದ್ವಿವೇದಿ ಅವರು ಮಾಹಿತಿ ನೀಡಿದರು.
'ಮಹಾ ಕುಂಭದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣ ಪತ್ತೆಗೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಲು ಆಯೋಗಕ್ಕೆ ಒಂದು ತಿಂಗಳು ಅವಕಾಶ ನೀಡಲಾಗಿದೆ. ಆದರೆ ಆದಷ್ಟು ತ್ವರಿತವಾಗಿ ತನಿಖೆ ಪೂರ್ಣಗೊಳಿಸಲು ಯತ್ನಿಸಲಾಗುವುದು' ಎಂದು ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಹರ್ಷಕುಮಾರ್ ಹೇಳಿದ್ದಾರೆ.
ನಿವೃತ್ತ ಡಿಜಿಪಿ ವಿ.ಕೆ.ಗುಪ್ತಾ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಿ.ಕೆ.ಸಿಂಗ್ ಅವರು ಆಯೋಗದ ಸದಸ್ಯರಾಗಿದ್ದಾರೆ.
ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹಾಗೂ ಡಿಜಿಪಿ ಪ್ರಶಾಂತಕುಮಾರ್ ಅವರು ಮಹಾ ಕುಂಭ ಮೇಳ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದರು.
'ಮೌನಿ ಅಮಾವಾಸ್ಯೆ' ಅಂಗವಾಗಿ ಇಲ್ಲಿನ 'ಸಂಗಮ'ದಲ್ಲಿ ಬುಧವಾರ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಇತರ 60 ಜನರು ಗಾಯಗೊಂಡಿದ್ದಾರೆ.