ನವದೆಹಲಿ: 'ನಿರ್ದಿಷ್ಟ ಅಂಗವೈಕಲ್ಯ' ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಎಂಬಿಬಿಎಸ್ಗೆ ಪ್ರವೇಶ ನೀಡುವ ಅವಕಾಶಗಳನ್ನು ಒಳಗೊಂಡ 2019ರ ಮಾರ್ಗಸೂಚಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದೆ.ಅಂಗವಿಕಲ ಅಭ್ಯರ್ಥಿಗಳ ಅಗತ್ಯಗಳು ಭಿನ್ನವಾಗಿರುತ್ತವೆ.
'ಎಲ್ಲರಿಗೂ ಒಂದೇ ರೀತಿಯ ನಿಯಮ ಅಥವಾ ಸಾರ್ವತ್ರಿಕ ಪರಿಹಾರ' ಎಂಬ ವಿಧಾನ ಬೇಡ' ಎಂದಿರುವ ಸುಪ್ರೀಂ ಕೋರ್ಟ್, 'ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016' ಅನ್ವಯಿಸುವಾಗ ಹೊಂದಾಣಿಕೆ ಅಗತ್ಯ' ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ, ಈ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿತು.
ಶೇ 58ರಷ್ಟು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿ ಅನ್ಮೋಲ್ ಅವರಿಗೆ ರಾಜಸ್ಥಾನದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅಂಗವಿಕಲರ (ಒಬಿಸಿ) ಕೋಟಾದಡಿ ಪ್ರವೇಶ ನೀಡುವಂತೆ ಪೀಠ ನಿರ್ದೇಶನ ನೀಡಿದೆ.
ಅನ್ಮೋಲ್ಗೆ ಪ್ರವೇಶ ನಿರಾಕರಿಸುವ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ವೈದ್ಯಕೀಯ ಮಂಡಳಿ ನೀಡಿದ್ದ ವರದಿಯನ್ನು ತಿರಸ್ಕರಿಸಿರುವ ಪೀಠ, ಪ್ರತ್ಯೇಕ ಸದಸ್ಯರೊಬ್ಬರ ಶಿಫಾರಸನ್ನು ಮಾನ್ಯ ಮಾಡಿದೆ.
ವಿಚಾರಣೆ ವೇಳೆ, ಎಂಬಿಬಿಎಸ್ಗೆ ಪ್ರವೇಶ ಬಯಸುವ ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂಧಿಸಿ, 'ಎರಡೂ ಕೈಗಳು ಪರಿಪೂರ್ಣವಾಗಿರಬೇಕು', ಚಲನೆ ಮತ್ತು ಸಂವೇದನಾ ಸಾಮರ್ಥ್ಯ ಇರಬೇಕು ಹಾಗೂ ವ್ಯಕ್ತಿ ದೃಢವಾಗಿರಬೇಕು' ಎಂಬ ಅಂಶಗಳನ್ನು ಒಳಗೊಂಡ 2019ರ ಮಾರ್ಗಸೂಚಿಗಳಿಗೆ ಪೀಠವು ಆಕ್ಷೇಪ ವ್ಯಕ್ತಪಡಿಸಿತು.
'ಅಭ್ಯರ್ಥಿಯ ಎರಡೂ ಕೈಗಳು ಪರಿಪೂರ್ಣವಾಗಿ ಇರಬೇಕು ಎಂಬುದು ಸಂವಿಧಾನದ 41ನೇ ವಿಧಿಗೆ ವಿರುದ್ಧವಾಗಿದೆ. ಅಂಗವಿಕಲರ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಒಪ್ಪಂದ ಹಾಗೂ ಕಾಯ್ದೆಯಲ್ಲಿನ ಅವಕಾಶಗಳಿಗೂ ಇದು ವಿರುದ್ಧ'.
'ಈ ಮಾರ್ಗಸೂಚಿಗಳು ಅಂಗವೈಕಲ್ಯ ಇಲ್ಲದಿರುವವರನ್ನು ವೈಭವೀಕರಿಸುವಂತಿವೆ. ಬಹುಸಂಖ್ಯಾತರಿಗೆ ಸಮನಾದ ಇಲ್ಲವೇ ಅವರಿಗಿಂತಲೂ ವಿಶೇಷ ಸಾಮರ್ಥ ಉಳ್ಳ ವ್ಯಕ್ತಿಗಳು ಶ್ರೇಷ್ಠ ಎಂಬ ಸಂದೇಶ ರವಾನಿಸುವಂತಿವೆ' ಎಂದು ಹೇಳಿದೆ.
ಈ ವಿಚಾರವಾಗಿ ನ್ಯಾಯಾಲಯವು ಈ ಹಿಂದೆ ನೀಡಿರುವ ತೀರ್ಪುಗಳ ಅನುಸಾರ ಪರಿಷ್ಕೃತ ಮಾರ್ಗಸೂಚಿಗಳನ್ನು ರಚಿಸಿರುವ ಕುರಿತು ಮುಂದಿನ ವಿಚಾರಣೆ ದಿನವಾದ ಮೇ 3ರ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್ಎಂಸಿ) ಪೀಠವು ನಿರ್ದೇಶನ ನೀಡಿದೆ.