ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದ ಆಯೋಜಕರು ಫೆ. 16ರಂದು ಹಮ್ಮಿಕೊಂಡಿರುವ ರ್ಯಾಲಿಗೆ ಪಶ್ಚಿಮ ಬಂಗಾಳ ಸರ್ಕಾರ ಎತ್ತಿದ ಆಕ್ಷೇಪಕ್ಕೆ ತಡೆ ನೀಡಿರುವ ಕಲ್ಕತ್ತಾ ಹೈಕೋರ್ಟ್, ರ್ಯಾಲಿಗೆ ಷರತ್ತುಬದ್ಧ ಅನುಮತಿ ನೀಡಿದೆ.
ರಾಜ್ಯದ ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಧ್ವನಿವರ್ಧಕಗಳ ಬಳಕೆಯಿಂದ ಪರೀಕ್ಷಾರ್ಥಿಗಳಿಗೆ ತೊಂದರೆಯುಂಟಾಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಕೋಲ್ಕತ್ತ ಪೊಲೀಸರು ಅನುಮತಿ ನಿರಾಕರಿಸಿದ್ದರು. ಪೊಲೀಸರ ನಿರ್ಧಾರವನ್ನು ಆಯೋಜಕರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಮೃತಾ ಸಿನ್ಹಾ ಅವರಿದ್ದ ಪೀಠವು, ರ್ಯಾಲಿಗೆ ಅನುಮತಿ ನೀಡಿತು. ಜತೆಗೆ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆ ಮತ್ತು ಬಳಸುತ್ತಿರುವ ಧ್ವನಿವರ್ಧಕಗಳ ಮಾಹಿತಿ ನೀಡುವಂತೆ ನಿರ್ದೇಶಿಸಿತು.
'ಕಾರ್ಯಕ್ರಮ ಆಯೋಜನೆಗೊಂಡಿರುವ ಮೈದಾನದ ಸುತ್ತಮುತ್ತ ಯಾವುದೇ ಶಾಲೆಗಳಿಲ್ಲ. ಜತೆಗೆ ಕಾರ್ಯಕ್ರಮ ಭಾನುವಾರ ಆಯೋಜನೆಗೊಂಡಿದ್ದು, ಅದೇ ದಿನ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ' ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಪುರಸ್ಕರಿಸಿತು.