ನವದೆಹಲಿ, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಹೋಗಿದ್ದ ಸುಮಾರು 1,000 ಹಿಂದೂ ಭಕ್ತರು ಕಾಣೆಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿಕೆ ನೀಡಿದಾಗ ಈ ಜನರನ್ನು ಹುಡುಕುವ ಬಗ್ಗೆ ಮಾತನಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಮಹಾಕುಂಭ ಮೇಳವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿತು ಮತ್ತು ಇಷ್ಟೊಂದು ದೊಡ್ಡ ಧಾರ್ಮಿಕ ಕಾರ್ಯಕ್ರನವನ್ನು ಆಯೋಜಿಸುವ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುವವರಿಗೆ ಸೂಕ್ತ ಉತ್ತರವನ್ನು ನೀಡಿತು ಎಂದು ಪ್ರಧಾನಿ ಮೋದಿ ಹೇಳಿದ ಒಂದು ದಿನದ ನಂತರ ಯಾದವ್ ಅವರ ಹೇಳಿಕೆ ಬಂದಿದೆ.
ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ಮೋದಿ, ಮಹಾಕುಂಭ ಮೇಳದ ಯಶಸ್ಸು ಸರ್ಕಾರ ಮತ್ತು ಸಮಾಜದ ಅಸಂಖ್ಯಾತ ಜನರ ಕೊಡುಗೆಗಳ ಪರಿಣಾಮವಾಗಿದೆ ಎಂದು ಹೇಳಿದ್ದರು.
ಮಹಾಕುಂಭಕ್ಕಾಗಿ ಭಾರತ ಸರ್ಕಾರವು ನಿಗದಿಪಡಿಸಿದ ಬಜೆಟ್ ಎಷ್ಟು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೆಂದು ನಿರ್ಧರಿಸುತ್ತಿದ್ದರು ಎಂಬುದು ನಿಮಗೆ ತಿಳಿದಿದೆವೇ? ಐಪಿಎಸ್ ಅಧಿಕಾರಿಗಳು ಭಕ್ತರು ಸ್ನಾನ ಮಾಡಲು ಹೋಗುವುದನ್ನು ತಡೆಯುತ್ತಿದ್ದರು. ಅವರಿಗೆ ಅನುಕೂಲ ಮಾಡಿಕೊಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂದು ಹೇಳುತ್ತಿದ್ದರು ಎಂದು ಅಖಿಲೇಶ್ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಗಡಿಗಳಲ್ಲಿ ಜನರನ್ನು ತಡೆಯಲಾಗುತ್ತಿತ್ತು. ಕೇಂದ್ರವು ಮಹಾಕುಂಭಕ್ಕಾಗಿ ರಾಜ್ಯ ಸರ್ಕಾರಕ್ಕೆ ಬಜೆಟ್ ನೀಡುತ್ತಿತ್ತು - ಅದನ್ನು ಉಲ್ಲೇಖಿಸಬೇಕು. ಇತಿಹಾಸದ ಪುಟಗಳನ್ನು ತಿರುಚುತ್ತಿರುವ ಸಮಯದಲ್ಲಿ, ಅತಿದೊಡ್ಡ ಜೀವಹಾನಿ ಹಿಂದೂ ಭಕ್ತರದ್ದಾಗಿದೆ" ಎಂದು ಅವರು ಹೇಳಿದರು.
ಮಹಾಕುಂಭದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಬಿಜೆಪಿ ಮತ್ತು ಅದರ ಜನರು ಸಹಾಯ ಮಾಡಬೇಕು ಎಂದು ಯುಪಿಯ ಮಾಜಿ ಮುಖ್ಯಮಂತ್ರಿ ಹೇಳಿದರು.
ಕುಂಭಮೇಳಕ್ಕೆ ಬಂದಿದ್ದ 1000 ಹಿಂದೂಗಳು ಕಾಣೆಯಾಗಿದ್ದಾರೆ. ಅವರು ಎಲ್ಲಿಹೋದರು ಎಂಬ ಬಗ್ಗೆ ಮಾಹಿತಿ ಇಲ್ಲ. ಕಾಣೆಯಾದ 1000 ಜನರ ಬಗ್ಗೆ ಬಿಜೆಪಿ ಮಾಹಿತಿ ನೀಡಬೇಕು ಎಂದು ಯಾದವ್ ಆಗ್ರಹಿಸಿದ್ದಾರೆ.
ಸರ್ಕಾರವು ಕಾಣೆಯಾದ ಹಿಂದೂ ಸಹೋದರರನ್ನು ಹುಡುಕಿ ಅವರನ್ನು ಅವರ ಕುಟುಂಬಗಳೊಂದಿಗೆ ಸೇರಿಸಬೇಕು. ಜನರು ಕಾಣೆಯಾದವರ ಪೋಸ್ಟರ್ಗಳನ್ನು ಹಾಕುತ್ತಿದ್ದಾರೆ, ಆದರೆ, ಸರ್ಕಾರ ಅವುಗಳನ್ನು ತೆಗೆದುಹಾಕುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.