ಮುಂಬೈ/ನಾಗ್ಪುರ: ಡಾ. ಕೇಶವ್ ಬಲಿರಾಮ್ ಹೆಡಗೇವಾರ್ ಹಾಗೂ ಮಾಧವ್ ಸದಾಶಿವರಾವ್ ಗೋಲ್ವಾಲ್ಕರ್ ಅವರಿಗೆ ಗೌರವ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 30ರಂದು ನಾಗ್ಪುರದ ಆರ್ಎಸ್ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವಾಂಕುಲೆ ಅವರು ಗುರುವಾರ ಮಾಹಿತಿ ನೀಡಿದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 2007ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭೇಟಿ ನೀಡಿದ್ದರು. ಆಗ ಅವರು ಪ್ರಧಾನಿ ಆಗಿರಲಿಲ್ಲ.
ಇದೇ ವರ್ಷ ಆರ್ಎಸ್ಎಸ್ಗೆ ನೂರು ವರ್ಷ ತುಂಬಲಿದೆ. ಅಕ್ಟೋಬರ್ನಲ್ಲಿ ವಿಜಯದಶಮಿಯಿಂದ ಈ ಸಂಬಂಧ ಸಂಭ್ರಮಾಚರಣೆಗಳು ಆರಂಭಗೊಳ್ಳಲಿವೆ. ಜೊತೆಗೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯು ಮುಕ್ತಾಯಗೊಂಡು ಹಲವು ತಿಂಗಳವೇ ಕಳೆದಿವೆ. ಹಾಗಾಗಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಈ ಎಲ್ಲ ಕಾರಣದಿಂದ ಪ್ರಧಾನಿ ಮೋದಿ ಅವರ ಭೇಟಿ ಮಹತ್ವ ಪಡೆದಿದೆ.