ಮಹಾಕುಂಭನಗರ: ಮಹಾಕುಂಭಮೇಳದ ಜನಜಂಗುಳಿಯಲ್ಲಿ ತಮ್ಮ ಕುಟುಂಬದಿಂದ ಬೇರ್ಪಟ್ಟಿದ್ದ 50,000ಕ್ಕೂ ಅಧಿಕ ಜನರನ್ನು ಮತ್ತೆ ಕುಟುಂಬಗಳ ಜೊತೆಗೆ ಸೇರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಮಹಾ ಕುಂಭಮೇಳದ ಸಮಯದಲ್ಲಿ, ದೇಶ ಮತ್ತು ವಿದೇಶಗಳ ಮೂಲೆ ಮೂಲೆಗಳಿಂದ 66 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ..
ಈ ವೇಳೆ ಕುಟುಂಬದಿಂದ ಬೇರ್ಪಟ್ಟ 54,357 ಮಂದಿ ಮತ್ತೆ ಒಂದಾಗಿದ್ದಾರೆ. ಬೇರ್ಪಟ್ಟವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು.
ಈ ಬಾರಿ, ಮಹಾಕುಂಭದ ಸಮಯದಲ್ಲಿ ಕಳೆದುಹೋದ ಜನರನ್ನು ಅವರ ಕುಟುಂಬಗಳೊಂದಿಗೆ ತ್ವರಿತವಾಗಿ ಸೇರಿಸಲು ರಾಜ್ಯ ಸರ್ಕಾರವು ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಿತ್ತು.
ಈ ಕೇಂದ್ರಗಳ ಮೂಲಕ 35,000ಕ್ಕೂ ಹೆಚ್ಚು ಭಕ್ತರು ಮಹಾಕುಂಭದ ಸಮಯದಲ್ಲಿ ತಮ್ಮ ಕುಟುಂಬವನ್ನು ಮತ್ತೆ ಸೇರಿಕೊಂಡಿದ್ದಾರೆ.
'ಅಮೃತ ಸ್ನಾನ'ದ ಸಮಯದಲ್ಲಿ ಮಕರ ಸಂಕ್ರಾಂತಿಯಂದು 598 ಭಕ್ತರು, ಮೌನಿ ಅಮವಾಸ್ಯೆಯಂದು 8,725 ಜನರು ಮತ್ತು ಬಸಂತ್ ಪಂಚಮಿಯಂದು 864 ಜನರು ಕಳೆದುಹೋಗಿದ್ದರು. ಡಿಜಿಟಲ್ ಕೇಂದ್ರಗಳ ಸಹಾಯದಿಂದ ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಿದ್ದಾರೆ.
ಇದಲ್ಲದೆ, ಇತರ ವಿಶೇಷ ದಿನಗಳ ಸ್ನಾನದ ಸಂದರ್ಭಗಳಲ್ಲಿ ಕಳೆದುಹೋಗಿದ್ದ 24,896 ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಪಕ್ರಮದ ಮೇರೆಗೆ ಮಹಾ ಕುಂಭ ನಗರದಾದ್ಯಂತ 10 ಡಿಜಿಟಲ್ ಲಾಸ್ಟ್ ಮತ್ತು ಫೌಂಡ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. AIಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆ, ಯಂತ್ರ ಕಲಿಕೆ ಮತ್ತು ಬಹುಭಾಷಾ ಬೆಂಬಲದಂತಹ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ವ್ಯವಸ್ಥೆ ಕಾರ್ಯಾಚರಿಸಿತು ಎಂದು ಹೇಳಿಕೆ ತಿಳಿಸಿದೆ.
ಮತ್ತೊಂದೆಡೆ, ಸರ್ಕಾರೇತರ ಸಾಮಾಜಿಕ ಸಂಸ್ಥೆಗಳಾದ ಭಾರತ್ ಸೇವಾದಳ ಮತ್ತು ಹೇಮಾವತಿ ನಂದನ್ ಬಹುಗುಣ ಸ್ಮೃತಿ ಸಮಿತಿ ಕೂಡ ಕಳೆದುಹೋದ ಜನರನ್ನು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.