ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 56 ತಿಂಗಳಲ್ಲಿ ದಿನಕ್ಕೆ ಸರಾಸರಿ 8 ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಭಾಗಶಃ ಸತ್ಯ ಎಂದು ಮಹಾರಾಷ್ಟ್ರದ ಪರಿಹಾರ ಮತ್ತು ಪುನರ್ವಸತಿ ಸಚಿವ ಮಕರಂದ್ ಜಾಧವ್ ಪಾಟೀಲ್ ಸೋಮವಾರ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಎನ್ಸಿಪಿ ಎಂಎಲ್ಸಿ ಶಿವಾಜಿರಾವ್ ಗರ್ಜೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಛತ್ರಪತಿ ಸಂಭಾಜಿನಗರ ಮತ್ತು ಅಮರಾವತಿ ವಿಭಾಗದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿ ಅಂಕಿ ಅಂಶಗಳ ವಿವರ ನೀಡಿದ ಸಚಿವರು, ಕಳೆದ ವರ್ಷ ಮರಾಠಾವಾಡ ವಿಭಾಗದಲ್ಲಿ 952 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕೋಲಾದಲ್ಲಿ 168, ವಾರ್ಧಾದಲ್ಲಿ 112, ಬೀಡ್ನಲ್ಲಿ 205, ಅಮರಾವತಿಯಲ್ಲಿ 1,069 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2024ರ ಜ.1 ರಿಂದ ಡಿ.31ರವರೆಗೆ ಛತ್ರಪತಿ ಸಂಭಾಜಿನಗರ ವಿಭಾಗದಲ್ಲಿ 952 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ 707 ರೈತರು ಪರಿಹಾರಕ್ಕೆ ಅರ್ಹರಾಗಿದ್ದರು, 433 ಮೃತ ರೈತರ ಕುಟುಂಬ ಪರಿಹಾರವನ್ನು ಸ್ವೀಕರಿಸಿದೆ ಎಂದರು.
ಬೀಡ್ ಜಿಲ್ಲೆಯಲ್ಲಿ 167 ಪ್ರಕರಣಗಳ ಪೈಕಿ 108 ಕುಟುಂಬ ಪರಿಹಾರವನ್ನು ಸ್ವೀಕರಿಸಿದೆ, ಅಮರಾವತಿಯಲ್ಲಿ 441 ಪ್ರಕರಣಗಳಲ್ಲಿ 332 ಕುಟುಂಬ ಪರಿಹಾರವನ್ನು ಪಡೆದಿದೆ ಎಂದು ಉತ್ತರಿಸಿದರು.