ನವದೆಹಲಿ: 'ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡುವುದರಿಂದ ಇತರರಿಗೆ ಅನಾನುಕೂಲ ಉಂಟಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಶಾಕುರ್ ಬಸ್ತಿ ಶಾಸಕ ಕರ್ನೈಲ್ ಸಿಂಗ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
'ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಇದರಿಂದ ತುರ್ತು ಸೇವೆಗಳಿಗೂ ತೊಂದರೆಯಾಗುತ್ತಿದೆ. ಹಲವು ಬಾರಿ ಆಂಬುಲೆನ್ಸ್, ಶಾಲಾ ಬಸ್ಸುಗಳು ಹಾಗೂ ಇತರ ತುರ್ತು ಸೇವೆಗಳ ವಾಹನಗಳು ಮುಂದೆ ಸಾಗದಂತಾದ ಉದಾಹರಣೆಗಳೂ ಇವೆ' ಎಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.
'ಧರ್ಮವನ್ನು ಅನುಸರಿಸಲು ಪ್ರತಿಯೊಬ್ಬರಿಗೂ ಅವರದ್ದೇ ಆದ ಹಕ್ಕುಗಳಿವೆ. ಆದರೆ ಅದರಿಂದ ಸಾರ್ವಜನಿಕ ಜೀವನ ಮತ್ತು ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಎಚ್ಚರವಹಿಸುವ ಜವಾಬ್ದಾರಿಯೂ ಇರಬೇಕು. ಹೀಗಾಗಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿರ್ದಿಷ್ಟ ಜಾಗ ಹಾಗೂ ಖಾಸಗಿ ಸ್ಥಳಗಳಲ್ಲಿ ಕೈಗೊಳ್ಳುವಂತೆ ಪೊಲೀಸರು ಕ್ರಮ ಜರುಗಿಸಬೇಕು' ಎಂದು ಕರ್ನೈಲ್ ಸಿಂಗ್ ಒತ್ತಾಯಿಸಿದ್ದಾರೆ.
ನಗರ ಮತ್ತು ಅರ್ಚಕರ ನಡುವೆ ಉತ್ತಮ ಬಾಂದವ್ಯ ಬೆಳೆಸುವ ನಿಟ್ಟಿನಲ್ಲಿ 2022ರಲ್ಲಿ ಬಿಜೆಪಿ ಆರಂಭಿಸಿದ ದೆಹಲಿಯ ದೇವಸ್ಥಾನಗಳ ಕೋಶದ ಮುಖ್ಯಸ್ಥರಾಗಿ ಕರ್ನೈಲ್ ಸಿಂಗ್ ಕೆಲಸ ಮಾಡಿದ್ದಾರೆ. 2025ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಸತ್ಯೇಂದರ್ ಜೈನ್ ಅವರನ್ನು 20 ಸಾವಿರ ಮತಗಳ ಅಂತರದಲ್ಲಿ ಸಿಂಗ್ ಪರಾಭವಗೊಳಿಸಿದ್ದರು.