ಶಿಮ್ಲಾ: ಹಿಮಾಚಲದ ಹಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಹಿಮಪಾತದಿಂದ ಭೂಕುಸಿತ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲುವಿನಲ್ಲಿ ಹಲವು ರಸ್ತೆಗಳ ಮೇಲೆ ಕಲ್ಲುಮಣ್ಣಿನ ರಾಶಿ ಜರಿದು, ಕೆಸರು ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ, ಹಲವು ವಾಹನಗಳಿಗೂ ಹಾನಿಯಾಗಿದೆ.
ಪಾಲಂಪುರದ ಶಿವ ಜಲವಿದ್ಯುತ್ ಯೋಜನೆಯ ಬಳಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಪತ್ತೆಗೆ ಶೋಧ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಾಂಗ್ರಾ ಜಿಲ್ಲೆಯ ರೋಕಾರುವಿನಲ್ಲಿ (ಮುಲ್ತಾನ್) ನಿರಂತರ ಮಳೆ ಸುರಿಯುತ್ತಿದ್ದು, ಮೇಘ ಸ್ಫೋಟದಿಂದ ಉಂಟಾದ ಭಾರಿ ಭೂಕುಸಿತವು ಹಲವು ಕಡೆಗಳಲ್ಲಿ ರಸ್ತೆ ಮತ್ತು ವಾಹನಗಳಿಗೆ ಹಾನಿ ಮಾಡಿದೆ. ಅಲ್ಲದೆ, 12 ಮನೆಗಳಿಗೂ ಹಾನಿಯಾಗಿದೆ. ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಕಾಂಗ್ರಾ ಜಿಲ್ಲಾಧಿಕಾರಿ ಹೇಮ್ ರಾಜ್ ತಿಳಿಸಿದ್ದಾರೆ.
ಭಾರಿ ಹಿಮಪಾತದಿಂದಾಗಿ ಚಂಬಾದಲ್ಲಿನ ಟ್ರೈಬಲ್ ಪಾಂಗಿ ಕಣಿವೆಯ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಮತ್ತು ದೂರಸಂಪರ್ಕ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಮಳೆ ಹಿಮಪಾತ ತಂದ ಅವಘಡ
* ತೊಹ್ಲು ನಲ್ಲಾದಲ್ಲಿ ಭೂಕುಸಿತದಿಂದ ಕಿರಾತ್ಪುರ್-ಮನಾಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದ್ದು ಸಂಕಷ್ಟದಲ್ಲಿ ಪ್ರವಾಸಿಗರು
* ಕುಲುವಿನಲ್ಲಿ 112 ರಸ್ತೆಗಳಲ್ಲಿ ಸಂಚಾರ ಸ್ಥಗಿತ
*ಕುಲು-ಮನಾಲಿ ರಸ್ತೆ ಬಂದ್ ಮಣಿಕರಣ್ ಮತ್ತು ಮನಾಲಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತ
* ಕುಲು ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಜನಜೀವನದ ಮೇಲೆ ಪರಿಣಾಮ.