ಢಾಕಾ: ಗಂಗಾ ನದಿ ನೀರು ಒಪ್ಪಂದ ಕುರಿತು ಚರ್ಚಿಸಲು 11 ಸದಸ್ಯರ ಬಾಂಗ್ಲಾದೇಶದ ನಿಯೋಗವು ಸೋಮವಾರ ಭಾರತಕ್ಕೆ ಭೇಟಿ ನೀಡಲಿದೆ.
ಒಪ್ಪಂದವು 2026ರಲ್ಲಿ ನವೀಕರಣಗೊಳ್ಳಬೇಕಿದೆ. ಇದು, ಉಭಯ ದೇಶಗಳ ತಾಂತ್ರಿಕ ಪರಿಣತರ ನಡುವಿನ 86ನೇ ಸಭೆಯಾಗಿದೆ. ಗಂಗಾ ನದಿ ನೀರು ಹಂಚಿಕೆ ಕುರಿತಂತೆ 30 ವರ್ಷಗಳ ಹಿಂದೆ ಒಡಂಬಡಿಕೆ ಆಗಿದೆ.
ಬಾಂಗ್ಲಾದೇಶದ ಜಂಟಿ ನದಿ ಆಯೋಗದ (ಜೆಆರ್ಸಿ) ಸದಸ್ಯ ಮೊಹಮ್ಮದ್ ಅಬುಲ್ ಹೊಸೈನ್ ನೇತೃತ್ವದ ನಿಯೋಗ ಮಾರ್ಚ್ 3ರಂದು ಕೋಲ್ಕತ್ತಕ್ಕೆ ಬರಲಿದೆ. ಮಾರ್ಚ್5ರವರೆಗೂ ನದಿ ಪಾತ್ರವನ್ನು ಪರಿಶೀಲಿಸಲಿದೆ. ಮಾರ್ಚ್ 6-7ಕ್ಕೆ ಕೋಲ್ಕತ್ತದಲ್ಲಿ ಸಭೆ ನಡೆಯಲಿದೆ ಎಂದು ಈ ಕುರಿತ ಪತ್ರದಲ್ಲಿ ವಿವರಿಸಲಾಗಿದೆ.
ಭಾರತದ ಜಲಶಕ್ತಿ ಸಚಿವಾಲಯದ ಪ್ರಕಾರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ 54 ನದಿಗಳು ಹಂಚಿಕೆ ಆಗಲಿವೆ. ಭಾರತ-ಬಾಂಗ್ಲಾದೇಶ ಜಂಟಿ ನದಿ ಆಯೋಗವನ್ನು 1972ರಲ್ಲಿ ರಚಿಸಲಾಗಿತ್ತು.
1996ರ ಡಿಸೆಂಬರ್ 12ರಂದು ಆಗಿನ ಭಾರತದ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಆಗಿನ ಬಾಂಗ್ಲಾದದೇ ಶದ ಪ್ರಧಾನಿ ಶೇಖ್ ಹಸೀನಾ ಅವರು ಗಂಗಾ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಿದ್ದರು.