ನವದೆಹಲಿ: ಎರಡು ದಿನಗಳ ಯಶಸ್ವಿ ಮಾರಿಷಸ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ನವದೆಹಲಿಗೆ ಬಂದಿಳಿದಿದ್ದಾರೆ.
ಪ್ರಧಾನಿ ಅವರ ಮಾರಿಷಸ್ ಪ್ರವಾಸದ ವೇಳೆ ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಉಭಯ ದೇಶದ ಬಾಂಧವ್ಯ ವೃದ್ಧಿ, ಅಭಿವೃದ್ಧಿಗೆ ಒತ್ತು ನೀಡಲಾಯಿತು.
ಎರಡನೇ ದಿನವಾದ ಬುಧವಾರ ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು.
'ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ'ಯ ಭಾಗವಾಗಿ ವ್ಯಾಪಾರ, ಕಡಲ್ಗಾವಲು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿ ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಉತ್ತೇಜಿಸಲು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಜಾಗತಿಕ ದಕ್ಷಿಣ ರಾಷ್ಟ್ರಗಳ ಬೆಳವಣಿಗೆ ಹಾಗೂ ಭದ್ರತೆಗಾಗಿ ಪ್ರಧಾನಿ ಮೋದಿ ಅವರು ಮಹತ್ವಾಕಾಂಕ್ಷೆಯ ದೂರದೃಷ್ಟಿಯ 'ಮಹಾಸಾಗರ' ಯೋಜನೆಯನ್ನು ಘೋಷಿಸಿದರು.
'ಮಾರಿಷಸ್ ಎಕ್ಸ್ಕ್ಲೂಸಿವ್ ಎಕಾನಮಿಕ್ ಝೋನ್' ಭದ್ರತೆಗೆ ನಮ್ಮ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಮಾರಿಷಸ್ ದೇಶದ ಅತ್ಯುನ್ನತ ಗೌರವವಾದ 'ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಯಂಡ್ ಕೀ ಆಫ್ ದಿ ಇಂಡಿಯನ್ ಓಷನ್' ನೀಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೌರವಿಸಲಾಯಿತು. ಪ್ರಧಾನಿ ಮೋದಿ ಅವರು ಮಾರಿಷಸ್ನ ಈ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.