ಲಖನೌ: ಪಾನ್ ಮಸಾಲ ಜಗಿದು ವಿಧಾನಸಭೆಯ ಪ್ರವೇಶದ್ವಾರದಲ್ಲಿ ಉಗಿದ ಶಾಸಕನಿಗೆ ಸ್ಪೀಕರ್ ತರಾಟೆಗೆ ತೆಗೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ನಡೆದಿದೆ.
ವಿಧಾನಸಭೆಯ ಮುಖ್ಯ ಸಭಾಂಗಣದ ಪ್ರವೇಶದ್ವಾರದಲ್ಲಿ ಕಾರ್ಪೆಟ್ ಮೇಲೆ ಪಾನ್ ಮಸಾಲ ಉಗುಳಿದ್ದ ಸದಸ್ಯರನ್ನು ಸ್ಪೀಕರ್ ಸತೀಶ್ ಮಹಾನಾ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲ ಶಾಸಕರು ಇಂತಹ ನಡವಳಿಕೆಗಳನ್ನು ಬಿಟ್ಟು, ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಬೆಳಿಗ್ಗೆ ಸದನ ಸೇರುತ್ತಿದ್ದಂತೆ, ಸದನದಲ್ಲಿ ಒಬ್ಬ ಸದಸ್ಯರು ಪಾನ್ ಮಸಾಲ ಉಗುಳಿದ್ದಾರೆಂದು ಮಹಾನಾ ಹೇಳಿದ್ದಾರೆ.
'ಆ ಸದಸ್ಯರು ಯಾರೆಂದು ನನಗೆ ತಿಳಿದಿದೆ. ವಿಡಿಯೊ ಲಭ್ಯವಿದೆ. ಆದರೆ, ನಾನು ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲದ ಕಾರಣ ಸಾರ್ವಜನಿಕವಾಗಿ ಹೆಸರು ಹೇಳಲು ಬಯಸುವುದಿಲ್ಲ. ಅದನ್ನು ಮಾಡಿದ ಸದಸ್ಯರು ನನ್ನನ್ನು ಭೇಟಿ ಮಾಡಬೇಕು. ಇಲ್ಲದಿದ್ದರೆ, ನಾನು ಅವರನ್ನು ಬಲವಂತವಾಗಿ ಕರೆಸಬೇಕಾಗುತ್ತದೆ" ಎಂದು ಅವರು ಹೇಳಿದರು.
ಸದನದ ಕಲಾಪ ಆರಂಭವಾಗುವ ಮೊದಲು ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಪೀಕರ್, ಸ್ಥಳಕ್ಕೆ ಹೋಗಿ ಶುಚಿ ಕಾರ್ಯದ ಮೇಲ್ವಿಚಾರಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ವಿಡಿಯೊದಲ್ಲಿ, ಕಾರ್ಪೆಟ್ ಬದಲಾಯಿಸಲು ಸದಸ್ಯರಿಂದ ಹಣವನ್ನು ತೆಗೆದುಕೊಳ್ಳಬೇಕು ಎಂದು ಅವರು ಕಾಮೆಂಟ್ ಮಾಡುತ್ತಿರುವುದು ಕೇಳಿಬಂದಿದೆ.
ರಾಜ್ಯದ 25 ಕೋಟಿ ಜನರು ವಿಧಾನಸಭೆಯ ಮೇಲೆ ತಮ್ಮ ಗೌರವ ಮತ್ತು ನಂಬಿಕೆಯನ್ನು ಇಟ್ಟಿದ್ದಾರೆ ಮತ್ತು ಅದರ ಘನತೆಯನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಮಹಾನಾ ಶಾಸಕರಿಗೆ ತಿಳಿ ಹೇಳಿದ್ದಾರೆ.