ಬದಿಯಡ್ಕ: 1400 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಗುರುವಾರ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪ್ರಾತಃಕಾಲ 7.34ರ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಹಾಗೂ ಪರಿವಾರ ದೇವತಾ ಪ್ರತಿಷ್ಠೆ, ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ ನಡೆಯಿತು.
ಪ್ರತಿಷ್ಠಾ ವಿಧಿಗಳನ್ನು ಪೂರೈಸಿ ಶ್ರೀದೇವರಿಗೆ ಗೋವಿನ ದರ್ಶನ ನೀಡಲಾಯಿತು. ಸ್ತೂಪಿಕಾ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಹಸ್ರಾರು ಮಂದಿ ಭಗವದ್ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ನಿತ್ಯನೈಮಿತ್ಯಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರ ಪೂಜೆ, ಮಂಟಪ ಸಂಸ್ಕಾರ, ಸೋಪಾನ ಪೂಜೆ ನಡೆಯಿತು.
ಎಡನೀರು ಶ್ರೀಗಳ ದಿವ್ಯ ಉಪಸ್ಥಿತಿ :
ಗೌರವಾಧ್ಯಕ್ಷ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಎಡನೀರು ಮಠ ಅವರು ದೇವತಾ ಪ್ರತಿಷ್ಠೆಯ ವೇಳೆ ಪಾಲ್ಗೊಂಡಿದ್ದರು. ಮಾ.1ರಿಂದ ಆರಂಭವಾದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.9ರಂದು ಸಮಾಪ್ತಿಯಾಗಲಿದೆ. ವಿವಿಧ ಸಂಘಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳಿಂದ ಹಸಿರುವಾಣಿ, ಪಾತ್ರೆ ಸಾಮಾಗ್ರಿಗಳು ದಿನನಿತ್ಯ ಹರಿದುಬರುತ್ತಿದೆ. ಮಧ್ಯಾಹ್ನ ಶಾಂಭವಿ ಪ್ರಾಣೇಶ್ ಇವರಿಂದ ಭಕ್ತಧ್ರುವರಾಯ ಶ್ರೀಹರಿಕಥೆ, ಧೀಶಕ್ತಿ ಮಹಿಳಾ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ, ವಿದುಷಿ ಲತಾ ಶಶಿಧರನ್ ಕಾಸರಗೋಡು ಇವರ ಶಿಷ್ಯವೃಂದದವರಿಂದ ಭರತನಾಟ್ಯ, ಯಕ್ಷರಂಜಿನಿ ಕಲಾಕೇಂದ್ರ ಬದಿಯಡ್ಕ ಹಾಗೂ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಇಂದು(ಶುಕ್ರವಾರ) ನಡೆಯುವ ಕಾರ್ಯಕ್ರಮಗಳು :
ಮಾ.7 ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಸಪ್ತಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀ ಬಾಲಕೃಷ್ಣ ಆಚಾರ್ಯ ನೀರ್ಚಾಲು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, 1.30ರಿಂದ ಡಾ| ವಾಣಿಶ್ರೀ ಕಾಸರಗೋಡು ನೇತೃತ್ವದ ಸಾಹಿತ್ಯ ಗಾನ ನೃತ್ಯ ವೈಭವ, ಸಂಜೆ 5 ಗಂಟೆಗೆ ನಡೆಯುವ ಮಾತೃಸಂಗಮದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಆಶೀರ್ವಚನ ನೀಡಲಿದ್ದಾರೆ. ನಿವೃತ್ತ ಕನ್ನಡ ಪ್ರಾಧ್ಯಾಪಕತಿ ಡಾ.ಮಹೇಶ್ವರಿ ಯು ಅಧ್ಯಕ್ಷತೆ ವಹಿಸಲಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಉದ್ಘಾಟಿಸಲಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಪ್ರಧಾನರಾದ ಈಶ್ವರಿ ಬೇರ್ಕಡವು ಮಾತೃಸಂದೇಶ ನೀಡಲಿದ್ದಾರೆ. ರಾತ್ರಿ 7.30ರಿಂದ ನಾಟ್ಯನಿಲಯ ಗುರು ಶ್ರೀ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯಾಮೃತಂ ಪ್ರದರ್ಶನಗೊಳ್ಳಲಿದೆ.