ಮುಂಬೈ: ಮೆಡಿಕ್ಲೇಮ್ ಪಾಲಿಸಿ ಅಡಿಯಲ್ಲಿ ವ್ಯಕ್ತಿಯೊಬ್ಬ ಪಡೆಯುವ ಹಣವನ್ನು, ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ವೈದ್ಯಕೀಯ ವೆಚ್ಚಗಳಿಗಾಗಿ ನೀಡುವ ಪರಿಹಾರ ಮೊತ್ತದಿಂದ ಕಡಿತ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಹಕ್ಕುದಾರ ಹಾಗೂ ವಿಮಾ ಕಂಪನಿಯ ನಡುವಿನ ಗುತ್ತಿಗೆ ಒಪ್ಪಂದಕ್ಕೆ ಅನುಗುಣವಾಗಿ ಮೆಡಿಕ್ಲೇಮ್ ಪಾಲಿಸಿಯ ಅಡಿಯಲ್ಲಿ ಹಣ ನೀಡಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಚಂದುರ್ಕರ್, ಮಿಲಿಂದ್ ಜಾಧವ್ ಮತ್ತು ಗೌರಿ ಗೋಡ್ಸೆ ಅವರು ಇರುವ ಪೂರ್ಣಪೀಠ ಹೇಳಿದೆ.
ಏಕಸದಸ್ಯ ಪೀಠಗಳು ಹಾಗೂ ವಿಭಾಗೀಯ ಪೀಠಗಳು ಈ ವಿಚಾರವಾಗಿ ಭಿನ್ನ ನಿಲುವು ತಾಳಿದ್ದ ಕಾರಣಕ್ಕೆ ವಿಷಯವನ್ನು ಪೂರ್ಣ ಪೀಠದ ಪರಿಶೀಲನೆಗೆ ಒಪ್ಪಿಸಲಾಗಿತ್ತು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ಪೂರ್ಣ ಪೀಠವು, ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಮಂಡಳಿಯು ನ್ಯಾಯಸಮ್ಮತವಾಗಿ ಪರಿಹಾರವನ್ನು ಘೋಷಿಸಲು ಅಧಿಕಾರ ಹೊಂದಿದೆ ಹಾಗೂ ಆ ರೀತಿ ಘೋಷಿಸುವ ಹೊಣೆ ಹೊತ್ತಿದೆ ಎಂದು ವಿವರಿಸಿದೆ.
ವೈದ್ಯಕೀಯ ವೆಚ್ಚಗಳಿಗೆ ನೀಡಿದ್ದ ಹಣ ಮಾತ್ರವೇ ಅಲ್ಲದೆ, ಹೆಚ್ಚುವರಿಯಾಗಿ ಹಣಕಾಸಿನ ಪರಿಹಾರವನ್ನು ನೀಡಬೇಕು ಎಂದು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ.ಲಿ. ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೂರ್ಣ ಪೀಠ ನಡೆಸಿತ್ತು.
ಮೆಡಿಕ್ಲೇಮ್ ಪಾಲಿಸಿಯ ಭಾಗವಾಗಿ ಪಡೆಯುವ ವಿಮಾ ಹಣದಲ್ಲಿ ವೈದ್ಯಕೀಯ ವೆಚ್ಚಗಳು ಕೂಡ ಸೇರಿರುತ್ತವೆ ಎಂದು ಕಂಪನಿಯು ಹೇಳಿತ್ತು. ಇದರಿಂದಾಗಿ ಪರಿಹಾರವನ್ನು ಎರಡು ಬಾರಿ ನೀಡಿದಂತೆ ಆಗುತ್ತದೆ ಎಂದು ಅದು ವಾದಿಸಿತ್ತು.