ನವದೆಹಲಿ: ಗಡಿಪಾರಾದ ವಲಸಿಗ ಭಾರತೀಯರನ್ನು ವಿಮಾನದಲ್ಲಿ ಕರೆತರುವ ವೇಳೆ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿರುವುದಕ್ಕೆ ಭಾರತವು ಅಮೆರಿಕದ ಮುಂದೆ ತೀವ್ರ ಕಳವಳ ದಾಖಲಿಸಿದೆ. ಕೈ-ಕಾಲುಗಳಿಗೆ ಸರಪಳಿ ಹಾಕಿದ್ದು, ಮಹಿಳೆಯರನ್ನು ನಡೆಸಿಕೊಂಡ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರಾದ ಕೀರ್ತಿ ವರ್ಧನ್ ಸಿಂಗ್ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರ ನೀಡಿದರು. ಗಡಿಪಾರಾದವರ ಧಾರ್ಮಿಕ ಸೂಕ್ಷ್ಮತೆ ಮತ್ತು ಆಹಾರ ಆದ್ಯತೆ ಬಗ್ಗೆ ನಮ್ಮ ಕಳಕಳಿ ವ್ಯಕ್ತಪಡಿಸಿದ್ದೆವು. ಅಮೆರಿಕ ವಿದೇಶಾಂಗ ವಿಭಾಗ ಪ್ರತಿಕ್ರಿಯಿಸಿದ್ದು, ' ಸಸ್ಯಾಹಾರದ ಊಟಕ್ಕೆ ಗಡಿಪಾರಾದವರನ್ನು ಮನವಿ ಮಾಡಿದ್ದು ಬಿಟ್ಟರೆ ಧರ್ಮಾಧಾರಿತ ಶಿರವಸ್ತ್ರಗಳನ್ನು ತೆಗೆಯಲು ಸೂಚಿಸಿರಲಿಲ್ಲ. ಅವರು ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಕೇಳಿರಲಿಲ್ಲ' ಎಂದು ತಿಳಿಸಿದೆ ಎಂದರು.
ಮೂರು ವಿಮಾನಗಳಲ್ಲಿ (ಫೆಬ್ರುವರಿ 5, 15, 16ರಂದು) ಗಡಿಪಾರಾದ ನೂರಾರು ಮಂದಿಯನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ನಿರ್ದೇಶನಾಲಯ(ಐಸಿಇ) ಭಾರತಕ್ಕೆ ರವಾನಿಸಿತ್ತು. ಸಿ-17 ವಿಮಾನದಲ್ಲಿ 104 ಮಂದಿಯನ್ನು ಕರೆತಂದಾಗ ಕೋಳ ತೊಡಿಸಿದ್ದು, ಇಚ್ಛಿಸಿದ ಊಟ ನೀಡದೇ ಇರುವುದು, ಧಾರ್ಮಿಕ ಆಚರಣೆಗೆ ನಿರ್ಬಂಧಿಸಿದ್ದು ಭಾರಿ ಟೀಕೆಗೆ ಗುರಿಯಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಫೆಬ್ರುವರಿ 6ರಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ' ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತೆ ಎಂಬ ಬಗ್ಗೆ ಅಮೆರಿಕದಿಂದ ಮಾಹಿತಿ ಕೇಳಿದ್ದೇವೆ. ಈ ಗಡಿಪಾರು ಅಕ್ರಮ ವಲಸೆಯನ್ನು ನಿಯಂತ್ರಿಸುವ ಅಮೆರಿಕದ ಭಾಗವಷ್ಟೇ' ಎಂದಿದ್ದರು.