ಚೆನ್ನೈ: ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ನಡುವಿನ ಭಾಷಾ ವಿವಾದ ಸಮರ ಮುಂದುವರಿದಿದೆ. 2025-26ರ ರಾಜ್ಯ ಬಜೆಟ್ನ ಲಾಂಛನವನ್ನು ತಮಿಳುನಾಡು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ರೂಪಾಯಿ ಚಿಹ್ನೆಗೆ ಬದಲಾಗಿ ತಮಿಳು ಅಕ್ಷರ ரூ (ರೂ.) ಬಳಸಿದೆ.ಇದು ರಾಜ್ಯ ಬಿಜೆಪಿ ಘಟಕದ ಕಣ್ಣು ಕೆಂಪಾಗಿಸಿದೆ.
ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಹೊಸ ಲಾಂಛನದಲ್ಲಿ ರೂಪಾಯಿ ಚಿಹ್ನೆ ಬದಲಿಗೆ ತಮಿಳು ಅಕ್ಷರ 'ರೂ' ( ரூ.) ಅನ್ನು ಬಳಸಲಾಗಿದೆ. ತಮಿಳಿನ 'ರೂಬಾಯಿ'ಯ ಸಂಕ್ಷಿಪ್ತ ರೂಪವೇ 'ರೂ'.
ಬಜೆಟ್ ಲಾಂಛನದಲ್ಲಿ 'ಎಲ್ಲರಿಗೂ ಎಲ್ಲವೂ' ಎನ್ನುವ ಅಡಿಬರಹ ಇದ್ದು, ಎಲ್ಲರನ್ನೂ ಒಳಗೊಳ್ಳುವುದರ ಸಂಕೇತ ಎಂದು ಡಿಎಂಕೆ ಸರ್ಕಾರ ಹೇಳಿದೆ.
ಸರ್ಕಾರದ ಈ ನಡೆಯನ್ನು ರಾಜ್ಯ ಬಿಜೆಪಿ ಘಟದ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.
'ಡಿಎಂಕೆ ಸರ್ಕಾರದ 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ತಮಿಳು ವ್ಯಕ್ತಿ ನೀಡಿದ ರೂಪಾಯಿ ಚಿಹ್ನೆಯನ್ನು ಬದಲಿಸಿದೆ. ಆ ಚಿಹ್ನೆಯನ್ನು ಇಡೀ ಭಾರತ ಒಪ್ಪಿಕೊಂಡಿದೆಯಲ್ಲದೇ, ಕರೆನ್ಸಿಯಲ್ಲೂ ಸೇರಿಸಲಾಗಿದೆ. ರೂಪಾಯಿ ಚಿಹ್ನೆಯನ್ನು ರಚಿಸಿದ ಶ್ರೀ ಉದಯ್ ಕುಮಾರ್ ಅವರು ಡಿಎಂಕೆಯ ಮಾಜಿ ಶಾಸಕರ ಪುತ್ರ. ಸ್ಟಾಲಿನ್ ಅವರೇ ನೀವು ಎಷ್ಟು ಮೂರ್ಖರಾಗಿರಬಹುದು?' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ ಜೊತೆಗೆ ಬಜೆಟ್ನ ಲಾಂಛನವನ್ನೂ ಹಂಚಿಕೊಂಡಿದ್ದಾರೆ.