ಚಂಡೀಗಢ: ಅಮೃತಸರದ ಠಾಕೂರ್ ದ್ವಾರ ದೇಗುಲದ ಸಮೀಪ ಮಾರ್ಚ್ 15ರಂದು ನಡೆದ ಸ್ಫೋಟ ಪ್ರರಣದ ಶಂಕಿತ ಆರೋಪಿ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಮತ್ತೊಬ್ಬ ಶಂಕಿತ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಾರ್ಚ್ 15 ರಂದು ಠಾಕೂರ್ ದ್ವಾರ ದೇವಾಲಯದ ಹೊರಗೆ ಸ್ಫೋಟ ಸಂಭವಿಸಿತ್ತು. ವ್ಯಕ್ತಿಯೊಬ್ಬ ಸ್ಫೋಟಕ ಸಾಧನ ಎಸೆದ ಪರಿಣಾಮ, ದೇವಾಲಯದ ಗೋಡೆಯ ಒಂದು ಭಾಗಕ್ಕೆ ಹಾನಿಯಾಗಿ, ಕಿಟಕಿ ಗಾಜುಗಳು ಪುಡಿಯಾಗಿದ್ದವು.
ಗುಪ್ತಚರ ಮಾಹಿತಿ ಮೇರೆಗೆ ಅಮೃತಸರ ಪೊಲೀಸರು ದಾಳಿಗೆ ಕಾರಣರಾದವರನ್ನು ರಾಜಾಸನ್ಸಿ ಎಂಬಲ್ಲಿ ಪತ್ತೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಪೊಲೀಸ್ ಸಿಬ್ಬಂದಿ ಗುರುಪ್ರೀತ್ ಸಿಂಗ್ ಗಾಯಗೊಂಡಿದ್ದಾರೆ. ಇನ್ಸ್ಪೆಕ್ಟರ್ ಅಮೊಲಕ್ ಸಿಂಗ್ ಅವರ ಪೇಟಕ್ಕೆ ಗುಂಡು ತಗುಲಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.
ಸ್ವಯಂ ರಕ್ಷಣೆಗೆ ಪೊಲೀಸರು ಮರುದಾಳಿ ನಡೆಸಿದ್ದು, ಆರೋಪಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಇನ್ನೊಬ್ಬ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ದೇವಸ್ಥಾನಕ್ಕೆ ಬರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕೆಲವು ಸೆಕೆಂಡು ಕಾದು, ಅವರಲ್ಲಿ ಒಬ್ಬರು ಸ್ಫೋಟಕವನ್ನು ದೇವಾಲಯದ ಕಡೆಗೆ ಎಸೆದು, ಪರಾರಿಯಾಗುವ ದೃಶ್ಯ ದಾಖಲಾಗಿದೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ, ಸ್ಫೋಟವು ಅಮೃತಸರದ ಖಂಡ್ವಾಲಾ ಪ್ರದೇಶದ ನಿವಾಸಿಗಳಲ್ಲಿ ಭೀತಿ ಉಂಟುಮಾಡಿತ್ತು.