ನವದೆಹಲಿ: 'ತ್ರಿಭಾಷಾ ಸೂತ್ರದಡಿ ಇಂಥದ್ದೆ ಭಾಷೆ ಕಲಿಸಬೇಕು ಎಂದು ರಾಜ್ಯಗಳ ಮೇಲೆ ಹೇರುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ಯಾವ ಭಾಷೆ ಕಲಿಸಬೇಕು ಎಂಬುದನ್ನು ಆಯಾ ರಾಜ್ಯಗಳು ನಿರ್ಧರಿಸಲಿವೆ' ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಸುಕಾಂತ್ ಮಜುಂದಾರ್ ಸಂಸತ್ತಿಗೆ ಬುಧವಾರ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, 'ಮಕ್ಕಳು ಯಾವ ಭಾಷೆ ಕಲಿಯಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ಅಥವಾ ವಿದ್ಯಾರ್ಥಿ ನಿರ್ಧರಿಸುತ್ತಾರೆ. ಸಂವಿಧಾನದಲ್ಲಿ ಮಾಡಿಕೊಡಲಾದ ಅವಕಾಶಗಳಿಗೆ ಅನುಗುಣವಾಗಿಯೇ ನಾವು ತ್ರಿಭಾಷಾ ಸೂತ್ರ ರೂಪಿಸಿದ್ದೇವೆ' ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರದಡಿ ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿತ್ತು. ಈ ಬಗ್ಗೆ ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ವಿವಾದವೂ ಸೃಷ್ಟಿಯಾಗಿತ್ತು. ಕೇಂದ್ರ ಸರ್ಕಾರವು ತಮಿಳನಾಡು ಸರ್ಕಾರದ ಆರೋಪಗಳನ್ನು ತಿರಸ್ಕರಿಸಿದೆ.