ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಈ ಶೈಕ್ಷಣಿಕ ವರ್ಷದ ಕಲಿಕೋತ್ಸವ ಗುರುವಾರ ನಡೆಯಿತು. ಈ ಸಂಬಂಧ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಾಫಿ ಚೂರಿಪಳ್ಳ ವಹಿಸಿದ್ದರು.
ಗ್ರಾ.ಪಂ. ಸದಸ್ಯ ಶ್ಯಾಮ ಪ್ರಸಾದ್ ಮಾನ್ಯ ದೀಪ ಬೆಳಗಿಸಿ ಉದ್ಘಾಟಿಸಿ, ವಿದ್ಯಾರ್ಥಿಗಳ ಈ ಶೈಕ್ಷಣಿಕ ವರ್ಷದ ಕಲಿಕಾ ಉತ್ಪನ್ನಗಳನ್ನು, ಹಿರಿಮೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮಹತ್ತರವಾದುದು. ಆಧುನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಸಮಗ್ರ ಅರಿವಿನ ವಿಸ್ತಾರತೆಗೆ ಬೆಂಬಲ ನೀಡಿ ಬೆಳವಣಿಗೆಗೆ ಪೂರಕವಾಗಿದೆ. ಸದುಪಯೋಗ ಅಗತ್ಯ ಎಂದರು.
ಸಿ ಆರ್ ಸಿ. ಸಂಯೋಜಕಿ ಭಾರತಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ನೌಕರ ಸಂಘದ ಕಾರ್ಯದರ್ಶಿ ಶಶಿಧರ ಮಾಸ್ತರ್, ಹಿರಿಯ ಅಧ್ಯಾಪಕರಾದ ಕಾರ್ತಿಕ ಟೀಚರ್, ಸಿನಿ ಟೀಚರ್, ಪ್ರಭಾವತಿ ಟೀಚರ್ ಶುಭ ಹಾರೈಸಿದರು. ವಿದ್ಯಾ ಟೀಚರ್, ತಂಗಮಣಿ, ಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಜ್ಯೋತ್ಸ್ನಾ ಟೀಚರ್, ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳ ವಿವಿಧ ವಿಷಯಗಳಲ್ಲಿ ಹಿರಿಮೆ ಪ್ರದರ್ಶನಗೊಂಡಿತು.