ನಾಗ್ಪುರ: ನಗರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಹತೋಟಿಗೆ ತರುವ ಯತ್ನಗಳು ನಡೆಯುತ್ತಿರುವ ನಡುವೆಯೇ ಹಂಸಪುರಿ ಪ್ರದೇಶದಲ್ಲಿ ಮತ್ತೊಂದು ಹಿಂಸಾಚಾರ ವರದಿಯಾಗಿದ್ದು, ನಾಗ್ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳದ ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ನಾಗ್ಪುರದ ಕೇಂದ್ರ ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
'ನಾಗ್ಪುರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163(ಮಾನವ ಜೀವಕ್ಕೆ ಅಪಾಯ, ಸಾರ್ವಜನಿಕ ಗೊಂದಲ ಅಥವಾ ಗಲಭೆಗಳನ್ನು ತಡೆಗಟ್ಟಲು ತುರ್ತು ಪ್ರಕರಣಗಳಲ್ಲಿ ತಕ್ಷಣದ ಆದೇಶಗಳನ್ನು ಹೊರಡಿಸಲು ಮ್ಯಾಜಿಸ್ಟ್ರೇಟ್ಗಳಿಗೆ ಅಧಿಕಾರ ನೀಡುವುದು) ಅನ್ನು ವಿಧಿಸಲಾಗಿದೆ' ಎಂದು ನಾಗ್ಪುರ ಪೊಲೀಸ್ ಆಯುಕ್ತ ಡಾ. ರವೀಂದರ್ ಸಿಂಘಾಲ್ ಹೇಳಿದ್ದಾರೆ.
ಸೋಮವಾರ ರಾತ್ರಿ 7.30ರ ಸುಮಾರಿಗೆ ಚಿಟ್ನಿಸ್ ಪಾರ್ಕ್ ಮತ್ತು ಮಹಲ್ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿತ್ತು. ಪೊಲೀಸರು ಸೇರಿದಂತೆ ಸುಮಾರು 15 ಜನರು ಘರ್ಷಣೆಯಲ್ಲಿ ಗಾಯಗೊಂಡಿದ್ದರು. ನಂತರ ರಾತ್ರಿ 10.30ರ ಸುಮಾರಿಗೆ ಹಂಸಪುರಿ ಪ್ರದೇಶದಲ್ಲಿ ಘರ್ಷಣೆ ಭುಗಿಲೆದ್ದಿದ್ದು, ಉದ್ರಿಕ್ತರ ಗುಂಪು ವಾಹನ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು.
ಹಂಸಪುರಿ ಪ್ರದೇಶದ ನಿವಾಸಿ ಶರದ್ ಗುಪ್ತಾ (50) ಅವರ ಮನೆಗೆ ಕಲ್ಲು ತೂರಾಟ ನಡೆಸಿದ್ದ ಉದ್ರಿಕ್ತರು, ಅವರ ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು.
'ದಾಳಿಯಲ್ಲಿ ನಾನು ಗಾಯಗೊಂಡಿದ್ದೆ. ನಮ್ಮ ಮನೆಯ ಪಕ್ಕದ ಅಂಗಡಿಗೂ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ. ರಾತ್ರಿ 1 ಗಂಟೆಯ ನಂತರ ಪೊಲೀಸರು ಬಂದರು' ಎಂದು ಗುಪ್ತಾ ಹೇಳಿದ್ದಾರೆ.
'ರಾತ್ರಿ 10.30ರ ಸುಮಾರಿಗೆ ಗುಂಪೊಂದು ಮನೆಯ ಮುಂದೆ ಬಂದು ಗಲಾಟೆ ನಡೆಸಿದ್ದು, ಮನೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಬರುವ ಮೊದಲೇ ಬೆಂಕಿ ನಂದಿಸಿದೆವು' ಎಂದು ಹಂಸಪುರಿ ನಿವಾಸಿಯೊಬ್ಬರು ಪಿಟಿಐಗೆ ಹೇಳಿದ್ದಾರೆ.
ಹಂಸಪುರಿ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.