ತಿರುವನಂತಪುರ: ಮಲಯಾಳ ನಟ ಮೋಹನ್ಲಾಲ್ ಅವರು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಟ ಮಮ್ಮುಟ್ಟಿ ಅವರಿಗಾಗಿ ವಿಶೇಷ ಪೂಜೆ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮೋಹನ್ ಲಾಲ್ ಅವರು ಮಾ.18ರಂದು ಮಮ್ಮುಟ್ಟಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.
ದೇಗುಲವು ನೀಡಿದ್ದ ರಸೀದಿಯಲ್ಲಿ ಮಮ್ಮುಟ್ಟಿ ಅವರ ಹೆಸರನ್ನು ಮಹಮ್ಮದ್ ಕುಟ್ಟಿ ಎಂದು ನಮೂದಿಸಲಾಗಿತ್ತು. ಈ ರಸೀದಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಕೆಲವರು ಮಮ್ಮುಟ್ಟಿ ಅವರು ಇಸ್ಲಾಂ ಸಮುದಾಯಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಹಿಂದೂ ದೇಗುಲದಲ್ಲಿ ಪೂಜೆ ಮಾಡಿಸಲಾಗಿದೆ ಎಂದು ತಕರಾರು ಎತ್ತಿದ್ದಾರೆ.
ಮೋಹನ್ಲಾಲ್ ಅಸಮಾಧಾನ: ವಿಶೇಷ ಪೂಜೆ ಕುರಿತ ರಸೀದಿಯನ್ನು ದೇಗುಲದ ಕೆಲವು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ಮೋಹನ್ಲಾಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಿರುವಾಂಕೂರು ದೇವಸ್ವ ಮಂಡಳಿಯು, 'ನಮ್ಮ ಕಡೆಯಿಂದ ರಸೀದಿಯು ಬಹಿರಂಗಗೊಂಡಿಲ್ಲ' ಎಂದು ಸ್ಪಷ್ಟನೆ ನೀಡಿದೆ.