ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭಾರೀ ಕಾರ್ಯಾಚರಣೆ ನಡೆಸಿದ್ದು, ದೋಡಾ ಜಿಲ್ಲೆಯಲ್ಲಿ ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿ, ಅಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.
ಅನುಮಾನಾಸ್ಪದ ಚಲನವಲನಗಳ ವರದಿಗಳ ಹಾಗೂ ಗುಪ್ತಚರ ಮಾಹಿತಿಯ ಮೇರೆಗೆ ಭದೇರ್ವಾದ ಭಲ್ರಾ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ಪೊಲೀಸರು ಮತ್ತು ಸೇನೆ ವಿಶೇಷ ಕಾರ್ಯಾಚರಣೆ ಗುಂಪು(ಎಸ್ಒಜಿ) ಕಾರ್ಯಾಚರಣೆಗಿಳಿದಿತ್ತು.
ಶೋದ ಕಾರ್ಯಾಚರಣೆ ವೇಳೆ ಉಗ್ರರ ಅಡಗುದಾಣ ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಯಾರನ್ನು ಬಂಧನಕ್ಕೊಳಪಡಿಸಿಲ್ಲ. ಆದರೆ, ಸ್ಫೋಟಕ ವಸ್ತು ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಪಕ್ಕದ ಕಿಶ್ತ್ವಾರ್ ಜಿಲ್ಲೆಯ ಗುರಿನಾಲ್, ಥಾಥ್ರಿ ಮತ್ತು ಚತ್ರೂ ಅರಣ್ಯದಲ್ಲಿ ಪೊಲೀಸರು, ಸೇನೆ ಮತ್ತು ಸಿಆರ್ಪಿಎಫ್ ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.