ಚೆನ್ನೈ: 'ಭಾಷೆಯ ಹೋರಾಟ ಮತ್ತು ಕ್ಷೇತ್ರ ಪುನರ್ವಿಂಗಡನೆ ನಮ್ಮ ಎದುರು ಇರುವ ಪ್ರಮುಖ ಸವಾಲುಗಳಾಗಿದ್ದು, ತಮಿಳಿಗರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ' ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಕರೆ ನೀಡಿದ್ದಾರೆ.
'ಭಾಷೆಯು ತಮಿಳರ ಜೀವನಾಡಿಯಾಗಿದ್ದರೆ, ನ್ಯಾಯಬದ್ಧ ಕ್ಷೇತ್ರ ಪುನರ್ವಿಂಗಡನೆ ನಮ್ಮ ಹಕ್ಕಾಗಿದೆ' ಎಂದು ಅವರು ಪ್ರತಿಪಾದಿಸಿದ್ದಾರೆ.
ತಮ್ಮ 72ನೇ ಹುಟ್ಟಹಬ್ಬದ ಮುನ್ನಾದಿನ ಡಿಎಂಕೆ ಕಾರ್ಯಕರ್ತರಿಗೆ ವಿಡಿಯೊ ಸಂದೇಶ ಕಳುಹಿಸಿರುವ ಅವರು, ಈ ಎರಡೂ ಸವಾಲುಗಳ ವಿರುದ್ಧ ತಮಿಳುನಾಡು ಮತ್ತು ಡಿಎಂಕೆ ಬದ್ಧತೆಯಿಂದ ಹೋರಾಟ ನಡೆಸುತ್ತದೆ ಎಂದು ಹೇಳಿದ್ದಾರೆ. ಜನಸಂಖ್ಯೆಯನ್ನು ಮಾತ್ರವೇ ಆಧರಿಸಿ ಸಂಸದೀಯ ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸಬಾರದು ಎಂಬುದು ತಮಿಳುನಾಡಿನ ಬೇಡಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇತರ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಅಸಮಾನ ಹೆಚ್ಚಳ ಆಗುವುದಿಲ್ಲ ಎಂಬ ಭರವಸೆಯನ್ನು ಅದು ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿ, ಆ ಪಕ್ಷವನ್ನು ತಮಿಳುನಾಡು ವಿರೋಧಿ ಎಂದು ಬಿಂಬಿಸುವುದನ್ನು ಮುಂದುವರಿಸಿದ್ದಾರೆ.