ಲಖನೌ: ರಾಮ ನವಮಿ ದಿನದಂದು ಎಲ್ಲಾ ಜಿಲ್ಲೆಗಳಲ್ಲಿನ ದೇವಾಲಯಗಳಲ್ಲಿ 24 ಗಂಟೆಗಳ ಕಾಲ 'ರಾಮಚರಿತಮಾನಸ ಪಠಣ ಆಯೋಜಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಏಪ್ರಿಲ್ 5 ರಂದು ಮಧ್ಯಾಹ್ನ ಪ್ರಾರಂಭವಾಗುವ ಪಠಣವು ಏಪ್ರಿಲ್ 6 ರಂದು ಮಧ್ಯಾಹ್ನ 12 ಗಂಟೆಗೆ ರಾಮ ಲಲ್ಲಾ ಮೂರ್ತಿಯ 'ಸೂರ್ಯ ತಿಲಕ'ದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಜಿಲ್ಲೆಗಳ ದೇವಾಲಯಗಳು ಈಗಾಗಲೇ ಅಗತ್ಯ ವ್ಯವಸ್ಥೆಗಳನ್ನು ಪ್ರಾರಂಭಿಸಿವೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಹಿರಿಯ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬಲರಾಂಪುರದ ದೇವಿಪಟನ್ ದೇವಾಲಯ, ಸಹರಾನ್ಪುರದ ಶಾಕುಂಭರಿ ದೇವಿ ದೇವಾಲಯ ಮತ್ತು ಮಿರ್ಜಾಪುರದ ವಿಂಧ್ಯವಾಸಿನಿ ದೇವಿ ಧಾಮ ಸೇರಿದಂತೆ ಪ್ರಮುಖ ದೇವಿ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸೂರ್ಯ ತಿಲಕ ವೀಕ್ಷಿಸಲು ದೇಶಾದ್ಯಂತ ಭಕ್ತರು ಅಯೋಧ್ಯೆಗೆ ಭೇಟಿ ನೀಡಬಹುದು. ಹಾಗಾಗಿ ಅವರಿಗೆ ಅನುಕೂಲತೆ ಹಾಗೂ ಸುರಕ್ಷತೆ ಒದಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಎಲ್ಲಾ ದೇವಾಲಯಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಸೌಲಭ್ಯ ಮತ್ತು ಛತ್ರದ ವ್ಯವಸ್ಥೆ ಮಾಡಬೇಕು ಎಂದು ಆದಿತ್ಯನಾಥ್ ಸೂಚಿಸಿದ್ದಾರೆ. ಅಲ್ಲದೇ, ದೇವಸ್ಥಾನಗಳ ಬಳಿ ಯಾವುದೇ ಮೊಟ್ಟೆ ಅಥವಾ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬಾರದು ಮತ್ತು ಅಕ್ರಮ ಗೋಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.