ಬದಿಯಡ್ಕ: ಸಹೃದಯ ಭಕ್ತರು, ಊರ ಜನರ ಸನ್ಮನಸ್ಸಿನ ಶ್ರದ್ಧೆಗಳಿಂದ ಆರಾಧನಾಲಯಗಳು ಕಾಲಾಕಾಲಕ್ಕೆ ಜೀಣೋದ್ಧಾರಗೊಳ್ಳಬೇಕಿದ್ದರೆ ಪ್ರಬಲ ಇಚ್ಛಾಶಕ್ತಿ ಕಾರಣವಾಗುತ್ತದೆ. ನಮ್ಮ ಗಳಿಕೆಯಲ್ಲಿ ಒಂದಂಶವನ್ನು ಸತ್ಕಾರ್ಯಗಳಿಗೆ ನೀಡುವ ದಾನ ಮನೋಭಾವದಿಂದ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಶ್ರೀಮದ್.ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಅಭಿಪ್ರಾಯಪಟ್ಟರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಶನಿವಾರದಿಂದ ಆರಂಭಗೊಂಡ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲನೆ ದಿನ ಸಂಜೆ ಸಾಂಸ್ಕøತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬದುಕಿನಲ್ಲಿ ನಾವು ಮಾಡುವ ದಾನ, ಕೊಡುಗೆಗಳು ನಮ್ಮ ಲೆಕ್ಕಪುಸ್ತಕದಲ್ಲಿರದೆ ಅದು ಭಗವಂತನ ಪುಸ್ತಕದಲ್ಲಿ ದಾಖಲಾದರೆ ಜೀವನ ಪಾವನವಾಗುತ್ತದೆ. ನಿಸ್ವಾರ್ಥ ಸೇವೆಗಳು ಬದುಕನ್ನು ಎತ್ತರಕ್ಕೇರಿಸುತ್ತದೆ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಧುಸೂದನ ಅಯರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಪಾದಂಗಳು ಆಶೀರ್ವಚನಗೈದು, ವಿಷ್ಣು ಸರ್ವ ವ್ಯಾಪಕ. ದೇವಾಲಯದ ಪ್ರತಿಯೊಂದು ರಚನೆಯ ಹಿಂದೆಯೂ ಒಂದೊಂದು ವಿಶಿಷ್ಟ ಅರ್ಥವ್ಯಾಪಕತೆ ಇದೆ. ಈ ನಿಟ್ಟಿನಲ್ಲಿ ಜಗವ್ಯಾಪಿಯಾದ ಮಹಾವಿಷ್ಣುವಿಗೆ ಇಲ್ಲಿ ಪುನರ್ ನಿರ್ಮಾಣಗೊಂಡ ವಿಶಾಲ ದೇವಾಲಯ ಪ್ರತಿಯೊಬ್ಬ ಭಜಕನ ಬದುಕಿನ ವಿಶಾಲತೆ ಮೆರೆಯುವಲ್ಲಿ ಕಾರಣವಾಗಲಿದೆ ಎಂದರು. ಭಗವಂತನಿಗೆ ಅರ್ಪಿತವಾಗುವ ಯಾವ ಸೇವೆಯೂ ಅನುಗ್ರಹಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಹಂಭಾವವಿಲ್ಲದ ತಗ್ಗಿಬಗ್ಗಿದ ನಿಷ್ಕಲ್ಮಷ ಭಕ್ತಿ ಅನುಗ್ರಹಕ್ಕೆ ಕಾರಣವಾಗುತ್ತದೆ ಎಂದರು. ಹಿಂದೂ ಸಂಸ್ಕøತಿ, ಆಚಾರ ವಿಚಾರಗಳನ್ನು ಹೊಸ ತಲೆಮಾರಿಗೆ ದಾಟಿಸುವ ಚಟುವಟಿಕೆಗಳು ಕ್ರಿಯಾತ್ಮಕವಾಗಿರಲಿ ಎಂದರು.
ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಕೆ.ಕೆ.ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಮಧೂರು ಶ್ರೀಕ್ಷೇತ್ರದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಮಲಬಾರ್ ದೈವಸ್ವಂಬೋರ್ಡ್ ಪರಿಶೋಧನಾಧಿಕಾರಿ ಉಮೇಶ್ ಅಟ್ಟೆಗೋಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಮಾನ ಮಾಸ್ತರ್ ಕಾರ್ಮಾರು, ನರಸಿಂಹ ಭಟ್ ಕಾರ್ಮಾರು, ವೆಂಕಪ್ಪ ಶೆಟ್ಟಿ ಕಾರ್ಮಾರು, ಶ್ರೀಕೃಷ್ಣ ಭಟ್ ಪುದುಕೋಳಿ, ತಿರುಮಲೇಶ್ವರ ಭಟ್ ಉಳ್ಳೋಡಿ,ಕುಞ್ಞಪ್ಪ ಮಣಿಯಾಣಿ ಕಾರ್ಮಾರು ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಸಂತೋಷ್ ಕುಮಾರ್ ಎಸ್.ಮಾನ್ಯ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.