ಚೆನ್ನೈ: ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರುವಿಂಗಡನೆ ಈಗಿನ ಜನಸಂಖ್ಯೆಯನ್ನು ಆಧರಿಸಿ ಮಾಡಬಾರದು. ನಾವು ಒಟ್ಟಾಗಿ ಅದನ್ನು ವಿರೋಧಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದರು.
ಚೆನ್ನೈನಲ್ಲಿ ನಡೆದ ಮರುವಿಂಗಡನೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಮರುವಿಂಗಡನೆಯು ಸಂಸತ್ನಲ್ಲಿ ನಮ್ಮ ಪ್ರಾತಿನಿಧ್ಯವನ್ನು ಕಡಿಮೆ ಮಾಡುತ್ತದೆ. ನಮ್ಮ ಅಭಿಪ್ರಾಯವನ್ನು ದಾಖಲಿಸುವವರ ಸಂಖ್ಯೆ ಕಡಿಮೆಯಾಗಲಿದೆ. ನಮ್ಮ ಪ್ರಾತಿನಿಧ್ಯ ಕಡಿಮೆಯಾದರೆ, ರಾಜ್ಯಗಳು ಅನುದಾನ ಪಡೆಯಲು ಹೋರಾಟ ಮಾಡಬೇಕು ಎಂದು ಹೇಳಿದರು.
ನಮ್ಮ ಅಭಿಪ್ರಾಯ ಪಡೆಯದೆ ಕಾನೂನುಗಳನ್ನು ರೂಪಿಸಲಾಗುತ್ತದೆ. ನಿರ್ಧಾರಗಳು ನಮ್ಮ ಜನರ ಮೇಲೆ ಪರಿಣಾಮ ಬೀರಲಿದೆ. ಪ್ರಮುಖ ಅವಕಾಶಗಳು ನಮ್ಮ ವಿದ್ಯಾರ್ಥಿಗಳ ಕೈತಪ್ಪಲಿದೆ. ಸಾಮಾಜಿಕ ನ್ಯಾಯದ ಮೇಲೆ ಪರಿಣಾಮ ಬೀರಲಿದೆ. ನಾಗರಿಕರು ತಮ್ಮ ದೇಶದಲ್ಲೇ ರಾಜಕೀಯ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಅವರು ನುಡಿದರು.
ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವನ್ನು ಬಲಪಡಿಸುವ ಯಾವುದನ್ನೂ ನಾವು ವಿರೋಧಿಸುವುದಿಲ್ಲ. ಆ ಪ್ರಕ್ರಿಯೆ ಮುಕ್ತವಾಗಿರಬೇಕು. ರಾಜಕೀಯ ಪ್ರಾತಿನಿಧ್ಯದ ಮೇಲೆ ಪ್ರಭಾವ ಬೀರಬಾರದು. ಇದು ಮರುವಿಂಗಡನೆಯ ವಿರುದ್ಧದ ಹೋರಾಟವಲ್ಲ. ಇದು ನ್ಯಾಯಯುತ ಮರುವಿಂಗಡನೆಗಾಗಿ ನಮ್ಮ ಆಗ್ರಹ ಎಂದರು.
ಈ ಸಭೆಗೆ ಸಮಾನ ಮನಸ್ಕ ಪಕ್ಷಗಳಿಗೆ ಸ್ಟಾಲಿನ್ ಅಹ್ವಾನ ನೀಡಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಬಿ.ಆರ್.ಎಸ್ ಪಕ್ಷದ ನಾಯಕ ಕೆ.ಟಿ ರಾಮ ರಾವ್ ನಾಯಕ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ.