ಚೆನ್ನೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಪಳಿಯಿಂದ ಕಟ್ಟಿಹಾಕಿದ್ದಂತೆ ಬಿಂಬಿಸಿದ್ದ ಕ್ಯಾರಿಕೇಚರ್ ಅನ್ನು ವೆಬ್ಸೈಟ್ನಿಂದ ತೆಗೆಯುವಂತೆ 'ಆನಂದ ವಿಕಟನ್' ಮಾಧ್ಯಮ ಸಂಸ್ಥೆಗೆ ಮದ್ರಾಸ್ ಹೈಕೋರ್ಟ್, ಸೂಚಿಸಿದೆ.
ವೆಬ್ಸೈಟ್ನಿಂದ ಕ್ಯಾರಿಕೇಚರ್ ತೆಗೆದಿರುವ ಮಾಹಿತಿಯನ್ನು ಸಂಸ್ಥೆಯು ಕೇಂದ್ರ ಸರ್ಕಾರಕ್ಕೂ ನೀಡಬೇಕು. ಈ ಮಾಹಿತಿ ತಲುಪಿದ ಬಳಿಕ 'ಆನಂದ ವಿಕಟನ್' ವೆಬ್ಸೈಟ್ಗೆ ಈಗ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯಕ್ಕೆ ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರು ಗುರುವಾರ ಸೂಚಿಸಿದರು.
ವೆಬ್ಸೈಟ್ಗೆ ನಿರ್ಬಂಧ ಹೇರಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಫೆ. 25, 2025ರ ಆದೇಶವನ್ನು ಆನಂದ ವಿಕಟನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ನಲ್ಲಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಿತು.
ಹಿರಿಯ ವಕೀಲ ವಿಜಯ ನಾರಾಯಣ್ ಅವರು 'ಆನಂದ ವಿಕಟನ್' ಪರವಾಗಿ ವಾದ ಮಂಡಿಸಿ, ಕ್ಯಾರಿಕೇಚರ್ ಪ್ರಕಟಣೆಯಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಆಗದು ಎಂದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಆರ್.ಎಲ್. ಸುಂದರೇಶನ್, 'ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು, ವೆಬ್ಸೈಟ್ನಿಂದ ಉಲ್ಲೇಖಿತ ಕ್ಯಾರಿಕೇಚರ್ ತೆಗೆದರೆ ನಿರ್ಬಂಧ ಹಿಂಪಡೆಯಬಹುದು ಎಂದು ಸಲಹೆ ಮಾಡಿದೆ' ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
ಉಭಯತ್ರರ ವಾದ ಆಲಿಸಿದ ನ್ಯಾಯಮೂರ್ತಿಗಳು, ಮಧ್ಯಂತರ ಆದೇಶವನ್ನು ನೀಡಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.