ಕಾಸರಗೋಡು: ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಎಸ್.ಎಚ್.ಎಂ ಆರ್.ಕೆ.ವಿ.ವೈ ರಫ್ತಾರ್ 2024-25 ಯೋಜನೆಯಡಿಯಲ್ಲಿ ಅಣಬೆ ಕೃಷಿಯ ವಿವಿಧ ಸಾಮಥ್ರ್ಯಗಳನ್ನು ಗರಿಷ್ಠಗೊಳಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಅಣಬೆ ಗ್ರಾಮ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಪರಪ್ಪದ ನ್ಯೂಟ್ರಿ ಬಡ್ಸ್ ಅಣಬೆ ತೋಟದಲ್ಲಿ ಶಾಸಕ ಇ.ಚಂದ್ರಶೇಖರನ್ ನೆರವೇರಿಸಿದರು. ಅಣಬೆ ಕೃಷಿಯು ಹೆಚ್ಚು ಸುಧಾರಿತ ತಂತ್ರಜ್ಞಾನಗಳನ್ನು ಬಳಸಬೇಕಾದ ಒಂದು ಕ್ಷೇತ್ರವಾಗಿದ್ದು, ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಶಾಸಕರು ಹೇಳಿದರು. ಸರ್ಕಾರದ "ಎಲ್ಲರೂ ಕೃಷಿಗೆ" ಕಾರ್ಯಕ್ರಮದ ಮೂಲಕ ಕೃಷಿಯ ಮಹತ್ವವನ್ನು ಎಲ್ಲಾ ಕ್ಷೇತ್ರಗಳಿಗೂ ತಿಳಿಸುವ ಅಗತ್ಯತೆಯ ಬಗ್ಗೆಯೂ ಶಾಸಕರು ಮಾತನಾಡಿದರು.
ಈ ಯೋಜನೆಯನ್ನು ರಾಜ್ಯ ತೋಟಗಾರಿಕೆ ಮಿಷನ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಒಂದು ಅಣಬೆ ಗ್ರಾಮ ಯೋಜನೆಯು ನೂರು ಸಣ್ಣ ಅಣಬೆ ಉತ್ಪಾದನಾ ಘಟಕಗಳು, ಎರಡು ದೊಡ್ಡ ಅಣಬೆ ಉತ್ಪಾದನಾ ಘಟಕಗಳು, ಒಂದು ಅಣಬೆ ಬೀಜ ಉತ್ಪಾದನಾ ಘಟಕ, ಮೂರು ಸಂಸ್ಕರಣಾ ಘಟಕಗಳು, ಎರಡು ಪ್ಯಾಕ್ ಹೌಸ್ಗಳು ಮತ್ತು ಹತ್ತು ಕಾಂಪೋಸ್ಟ್ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಪೌಷ್ಠಿಕಾಂಶಗಳಿಂದ ಕೂಡಿದ ಅಣಬೆಗಳಿಗೆ ಇಂದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಮೊದಲ ಹಂತದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾದ ರಾಜ್ಯದ 20 ಬ್ಲಾಕ್ಗಳಲ್ಲಿ ಕಾಸರಗೋಡು ಜಿಲ್ಲೆಯ ಪರಪ್ಪ ಬ್ಲಾಕ್ ಕೂಡ ಸೇರಿದೆ.
ಚಿಕ್ಕ ವಯಸ್ಸಿನಲ್ಲಿಯೇ ಅಣಬೆ ಕೃಷಿಯಲ್ಲಿ ಯಶಸ್ಸಿನ ಕಥೆಯನ್ನು ಹೊಂದಿದ್ದ ಪಿ. ಸಚಿನ್ ಎಂಬ ಯುವ ಉದ್ಯಮಿಯ ಉಪಸ್ಥಿತಿಯು ರೈತರಿಗೆ ಸ್ಫೂರ್ತಿ ನೀಡಿತು. ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಸಚಿನ್ ಪರಪ್ಪ ಬ್ಲಾಕ್ ಪಂಚಾಯತ್ನ ಇಡಂತೋಡÀಲ್ಲಿ ಕೃಷಿ ಇಲಾಖೆಯ ಸಹಾಯದಿಂದ ನ್ಯೂಟ್ರಿ ಬಡ್ಸ್ ಎಂಬ ಅಣಬೆ ಫಾರ್ಮ್ ಅನ್ನು ಸ್ಥಾಪಿಸಿದರು. ಇಂದು ಇಲ್ಲಿಂದ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ಸ್ಥಳಗಳಿಗೆ ಅಣಬೆ ರಫ್ತಾಗುತ್ತದೆ.
ಪರಪ್ಪ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕೆ.ಭೂಪೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕೃಷಿ ಉಪನಿರ್ದೇಶಕಿ ಕೆ.ಎನ್. ಜ್ಯೋತಿ ಕುಮಾರಿ ಯೋಜನೆಯನ್ನು ವಿವರಿಸಿದರು. ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಪಿ.ರಾಘವೇಂದ್ರ, ಬಳಾಲ್ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯ ಜೋಸೆಫ್ ವರ್ಕಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಸುಜಿತಾ ಮೋಲ್ ಸ್ವಾಗತಿಸಿ, ಬಳಾಲ್ ಕೃಷಿ ಅಧಿಕಾರಿ ನಿಖಿಲ್ ನಾರಾಯಣನ್ ವಂದಿಸಿದರು.