ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಅವರ ತಾಂತ್ರಿಕತ್ವದಲ್ಲಿ ಶುಕ್ರವಾರ ಮಹಾ ಶ್ರೀಚಕ್ರ ನವಾವರಣ ಪೂಜೆ ನಡೆಯಿತು.
ಬೆಳಗ್ಗೆ ವೇದಮೂರ್ತಿ ಶ್ರೀ ನರಸಿಂಹ ಅಡಿಗ ಕೊಲ್ಲೂರು ಇವರಿಂದ ಚಂಡಿಕಾ ಹವನ ನಡೆಯಿತು. ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ ಇವರ ಪ್ರಸ್ತುತಿಯಲ್ಲಿ ಅಷ್ಟಾವಧಾನ ಸೇವೆ ನಡೆಯಿತು. ಚತುರ್ವೇದ, ಸಂಗೀತ, ಯಕ್ಷಗಾನ, ನಾಟ್ಯ ಸೇವೆಗಳ ನಂತರ ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿ, ಸಾಧನೆ ಮಾಡುವುದರೊಂದಿಗೆ ದೇವರ ಅನುಗ್ರಹವನ್ನು ಸಂಪಾದನೆ ಮಾಡಬೇಕಾದರೆ ಸತ್ವಗುಣದ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಜಗನ್ಮಾತೆಯನ್ನು ಶ್ರೀ ರೂಪದಲ್ಲಿ ಆರಾಧನೆ ಮಾಡಬೇಕು. ಕಷ್ಟದಲ್ಲಿರುವವರಿಗೆ ರಕ್ಷಣೆ, ಸಹಕಾರ, ಪರೋಪಕಾರ, ಆಸೆಗಳ ಪೂರೈಕೆ, ಧರ್ಮಾಚರಣೆ ಮೊದಲಾದವು ರಜೋಗುಣದ ಸ್ವಭಾವಗಳಾಗಿವೆ. ಅಜ್ಞಾನ ನಿದ್ರೆ, ಆಲಸ್ಯ, ಭಯಗಳು ತಮೋಗುಣಗಳಾಗಿವೆ. ದುರ್ಗಾದೇವಿಯ ಅನುಗ್ರಹದಿಂದ ತಮೋಗುಣದ ದೋಷಗಳು ನಿವಾರಣೆಯಾಗುತ್ತದೆ. ದೇವಿಯ ಆರಾಧನೆಯಿಂದ ಜೀವನದಲ್ಲಿ ತಿಳಿಯದೇ ಇರುವುದನ್ನು ತಿಳಿಯುವ ಶಕ್ತಿ ಲಭಿಸುತ್ತದೆ ಎಂದರು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಮಾಜಿ ಸಂಸದ ವಿನಯಕುಮಾರ್ ಸೊರಕೆ ಹಾಗೂ ಗಣ್ಯರು ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.