ಶಿಮ್ಲಾ: ಹಿಮಾಚಲ ಪ್ರದೇಶದ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ, ಪೊಲೀಸ್ ಮಹಾನಿರ್ದೇಶಕ ಅತುಲ್ ವರ್ಮ ಸೇರಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನವು ಶಿಮ್ಲಾದ ಜುಬ್ಬಾರ್ಹಟ್ಟಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಜಾಗ ಬಿಟ್ಟು ಪಕ್ಕಕ್ಕೆ ಜಾರಿದ್ದರಿಂದ ಕೆಲ ಹೊತ್ತು ಆತಂಕ ಮನೆಮಾಡಿತ್ತು.
ಸೋಮವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಇಳಿಯುವ ವೇಳೆ ರನ್ವೇಯನ್ನು ಬಿಟ್ಟು ಪಕ್ಕಕ್ಕೆ ಸರಿದು, ಇಳಿಯುವ ದಾರಿಯ ಅಂಚಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
'ಹೊರಡುವ ಮುನ್ನ ಎಂದಿನಂತೆ ತಪಾಸಣೆ ನಡೆದಿತ್ತು. ತಾಂತ್ರಿಕ ಸಮಸ್ಯೆ ಬಗ್ಗೆ ಎಂಜಿನಿಯರ್ಗಳು ಪರಿಶೀಲಿಸಿದ್ದಾರೆ. ರನ್ ವೇ ಚಿಕ್ಕದಾಗಿದ್ದ ಕಾರಣ ಪಕ್ಕಕ್ಕೆ ಜಾರಿರಬಹುದು. ಸುಮಾರು 20ರಿಂದ 25 ನಿಮಿಷ ಪ್ರಯಾಣಿಕರೆಲ್ಲ ವಿಮಾನದಲ್ಲೇ ಇದ್ದೆವು' ಎಂದು ಉಪಮುಖ್ಯಮಂತ್ರಿ ಅಗ್ನಿಹೋತ್ರಿ ಹೇಳಿದರು. ಘಟನೆಯಿಂದಾಗಿ ಧರ್ಮಶಾಲಾಗೆ ತೆರಳಬೇಕಿದ್ದ ವಿಮಾನ ರದ್ದಾಯಿತು.
ಶಿಮ್ಲಾದಿಂದ 15 ಕಿ.ಮೀ. ದೂರದಲ್ಲಿರುವ ಜಬ್ಬಡ್ಹಟ್ಟಿ ಹಟ್ಟಿ ವಿಮಾನ ನಿಲ್ದಾಣದ ಇಳಿಯುವ ಜಾಗ 1230 ಮೀಟರ್ ಮಾತ್ರವೇ ಇದೆ. ಪ್ರಸ್ಥಭೂಮಿ ಮಾದರಿಯ ಎತ್ತರ ಪ್ರದೇಶದ ಅಕ್ಕ-ಪಕ್ಕ ದೊಡ್ಡ ಇಳಿಜಾರಿದ್ದು, ಲ್ಯಾಂಡಿಂಗ್ಗೆ ಸವಾಲೊಡ್ಡುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.