ನವದೆಹಲಿ/ ರಾಯಪುರ: ಛತ್ತೀಸಗಢ, ಜಾರ್ಖಂಡ್ನ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಕಚ್ಚಾಬಾಂಬ್ಗಳು (ಐಇಡಿ) ದೊಡ್ಡ ಸಂಖ್ಯೆಯಲ್ಲಿ ಪತ್ತೆಯಾದ ಬಳಿಕ ಕಟ್ಟೆಚ್ಚರ ಘೋಷಿಸಲಾಗಿದೆ.
ಬಿಯರ್ ಬಾಟಲ್ ಬಳಸಿ ಸಿದ್ಧಪಡಿಸಿದ ಕಚ್ಚಾಬಾಂಬ್ಗಳು ಹಾಗೂ ಸಣ್ಣ ಆಯಂಟೆನಾ ಬಳಸಿ ರಿಮೋಟ್ ಕಂಟ್ರೋಲ್ನಿಂದ ಸ್ಫೋಟಿಸುವಂತಹ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2026ರ ಮಾರ್ಚ್ ತಿಂಗಳ ಒಳಗಾಗಿ ಎಡಪಂಥೀಯ ಉಗ್ರವಾದವನ್ನು ತೊಡೆದುಹಾಕಲು ಕೇಂದ್ರ ಸರ್ಕಾರ ಗಡುವು ವಿಧಿಸಿದೆ. ಇದರ ಬೆನ್ನಲ್ಲೇ, ಭದ್ರತಾ ಪಡೆಗಳು ನಕ್ಸಲ್ ಪ್ರಾಬಲ್ಯ ಹೊಂದಿರುವ ಸ್ಥಳಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದು,, ವಶಕ್ಕೆ ಪಡೆದ ಐಇಡಿಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
'ಭದ್ರತಾ ಪಡೆಗಳು ಛತ್ತೀಸಗಢದ ಬಸ್ತಾರ್ನಲ್ಲಿ ವಿಶೇಷ ಶಿಬಿರಗಳನ್ನು ಸ್ಥಾಪಿಸುತ್ತಿವೆ. ಇದರಿಂದ ನಕ್ಸಲರು- ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ನಡೆಯುವುದು ಕಡಿಮೆಯಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹದ ಪ್ರಮಾಣದಲ್ಲೂ ಕುಸಿತ ಉಂಟಾಗಿದೆ. ಹೀಗಾಗಿ, ನಕ್ಸಲರು ಕಚ್ಚಾಬಾಂಬ್ಗಳ ಬಳಕೆಗೆ ಮುಂದಾಗಿದ್ದಾರೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.