ನಾಗರ್ಕರ್ನೂಲ್: ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಭಾಗದ ಸುರಂಗದಲ್ಲಿ ಸಿಲುಕಿರುವ ಎಂಟು ಕಾರ್ಮಿಕರ ರಕ್ಷಣೆಗಾಗಿ ಹೂಳು ತೆರವುಗೊಳಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ.
ಸುರಂಗ ಕುಸಿದಿದಿದ್ದರಿಂದ ಮಣ್ಣು ಸಾಗಣೆ ಮಾಡುವುದು ಕಷ್ಟವಾಗಿದೆ.
ಸಾಗಣೆ ಮಾಡುವ ವ್ಯವಸ್ಥೆ ಸರಿಪಡಿಸುವ ಕೆಲಸವು ಸೋಮವಾರದ ವೇಳೆಗೆ ಮುಗಿಯುವ ನಿರೀಕ್ಷೆಯಿದೆ. ಆ ಬಳಿ ಹೂಳು ತೆರವುಗೊಳಿಸುವ ಪ್ರಕ್ರಿಯೆ ಇನ್ನಷ್ಟು ಸುಗಮ ಮತ್ತು ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಟು ಕಾರ್ಮಿಕರಲ್ಲಿ ನಾಲ್ವರು ಸಿಲುಕಿದ್ದ ಸ್ಥಳವನ್ನು ಶನಿವಾರ ಗುರುತಿಸಲಾಗಿತ್ತು. ರಾಷ್ಟ್ರೀಯ ಭೂವಿಜ್ಞಾನ ಸಂಶೋಧನಾ ಸಂಸ್ಥೆ (ಎನ್ಜಿಆರ್ಐ) ವಿಜ್ಞಾನಿಗಳು ರೇಡಾರ್ ಬಳಸಿ ಸುರಂಗದಲ್ಲಿ ಕೆಲ ವೈಪರೀತ್ಯಗಳನ್ನು ಗುರುತಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಇಲಾಖೆಯು ಶನಿವಾರ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಸ್ತುತ 18 ಸಂಘಟನೆಗಳು, 54 ಅಧಿಕಾರಿಗಳು, 703 ಜನರು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದೆ.