ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ವೃದ್ಧೆಯೊಬ್ಬರಿಗೆ ಏರ್ ಇಂಡಿಯಾ ಕಂಪನಿಯ ಸಿಬ್ಬಂದಿ ಗಾಲಿಕುರ್ಚಿ ನಿರಾಕರಿಸಿರುವುದು ವರದಿಯಾಗಿದ್ದು, ಈ ಕುರಿತು ಆಕೆಯ ಮೊಮ್ಮಗಳು 'ಎಕ್ಸ್'ನಲ್ಲಿ ನೋವು ತೋಡಿಕೊಂಡಿದ್ದಾರೆ.
ಮಾರ್ಚ್ 4ರಂದು ಬೆಂಗಳೂರಿಗೆ ಪ್ರಯಾಣಿಸಲು ತನ್ನ ಮೊಮ್ಮಗಳೊಟ್ಟಿಗೆ ವೃದ್ಧೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
82 ವರ್ಷದ ಅವರಿಗೆ ಅನುಕೂಲವಾಗಲೆಂದು ಗಾಲಿಕುರ್ಚಿ ಬುಕಿಂಗ್ ಮಾಡಲಾಗಿತ್ತು. ಆದರೆ, ವಿಮಾನದ ಸಿಬ್ಬಂದಿ ಗಾಲಿಕುರ್ಚಿ ಅಥವಾ ಅಗತ್ಯ ನೆರವು ಕಲ್ಪಿಸಲಿಲ್ಲ. ವಿಮಾನ ಹತ್ತಲು ನಡೆದು ಹೋಗುವಾಗ ಅವರು ಕುಸಿದು ಬಿದ್ದರು ಎಂದು ಹೇಳಲಾಗಿದೆ.
'ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು (ಡಿಜಿಸಿಎ) ಏರ್ ಇಂಡಿಯಾಕ್ಕೂ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಯಾವ ಕ್ರಮಗೊಳ್ಳಲಾಗುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ' ಎಂದು ಮೊಮ್ಮಗಳು ತಿಳಿಸಿದ್ದಾರೆ.
ಆರೋಪ ನಿರಾಕರಣೆ: ಈ ಪ್ರಕರಣ ಕುರಿತು ತನಿಖೆ ನಡೆಸಲಾಗಿದೆ. ವಿಮಾನ ಪ್ರಯಾಣ ಆರಂಭಕ್ಕೂ 90 ನಿಮಿಷ ಮೊದಲು ಗಾಲಿಕುರ್ಚಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ವೇಳೆ ಕೋರಿಕೆ ಮಂಡಿಸಲಾಗಿದೆ. 15 ನಿಮಿಷದೊಳಗೆ ಗಾಲಿಕುರ್ಚಿ ಕಲ್ಪಿಸಲು ಸಾಧ್ಯವಾಗಿಲ್ಲ. ಆದರೆ, ಒಂದು ಗಂಟೆ ವಿಳಂಬ ಮಾಡಲಾಗಿದೆ ಎಂಬ ಆರೋಪವು ಸತ್ಯಕ್ಕೆ ದೂರವಾದುದು ಎಂದು ಏರ್ ಇಂಡಿಯಾ ಕಂಪನಿ ಸ್ಪಷ್ಟನೆ ನೀಡಿದೆ.
ವೃದ್ಧೆಗೆ ಗಾಲಿಕುರ್ಚಿ ಅಥವಾ ನೆರವು ನೀಡಲು ಸಿಬ್ಬಂದಿ ನಿರಾಕರಿಸಿಲ್ಲ. ಅವರ ಪ್ರಯಾಣ ಮುಗಿಯುವವರೆಗೂ ಅಗತ್ಯವಿರುವ ಸಹಾಯ ನೀಡಿದ್ದಾರೆ. ಮೊಮ್ಮಗಳ ಜೊತೆಯಲ್ಲಿಯೇ ನಡೆದುಕೊಂಡು ಹೋಗುವುದಾಗಿ ಅವರೇ ಹೇಳಿದ್ದಾರೆ. ಆ ವೇಳೆ ಅವರು ಕುಸಿದು ಬಿದ್ದ ತಕ್ಷಣವೇ ನಿಲ್ದಾಣದ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿಸಿದೆ.