ಪುಣೆ: ಛತ್ರಪತಿ ಶಿವಾಜಿ ಮಹಾರಾಜ ಮತ್ತು ಪುತ್ರ ಛತ್ರಪತಿ ಸಂಭಾಜಿ ಕುರಿತು ಕೆಟ್ಟ ಭಾಷೆ ಬಳಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯ ಪತ್ರಕರ್ತ ಪ್ರಶಾಂತ್ ಕೊರಟಕರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನಾಗ್ಪುರ ನಿವಾಸಿ ಕೊರಟಕರ್ ಅವರನ್ನು ಮಾರ್ಚ್ 24ರಂದು ತೆಲಂಗಾಣದಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದರಿಂದ ಭದ್ರತೆ ದೃಷ್ಟಿಯಿಂದಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ಕೊರಟಕರ್ ಅವರನ್ನು ಸುರಕ್ಷತೆ ದೃಷ್ಟಿಯಿಂದ ಕೊಲ್ಹಾಪುರದ ಕಲಾಂಬ ಜೈಲಿನ ಪ್ರತ್ಯೇಕ ಕೋಣೆಯಲ್ಲಿ ಇಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲ್ಹಾಪುರದ ಇತಿಹಾಸ ತಜ್ಞ ಇಂದ್ರಜಿತ್ ಸಾವಂತ್ ಮತ್ತು ಕೊರಟಕರ್ ನಡುವೆ ಫೆಬ್ರವರಿ 26ರಂದು ಮೊಬೈಲ್ ಸಂಭಾಷಣೆ ನಡೆದಿತ್ತು. ಸಾವಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪೋಸ್ಟ್ ಮಾಡಿದ ಬಳಿಕ ಕೊರಟಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೆಲವರು ಕೂಡಲೇ ಬಂಧಿಸಲು ಆಗ್ರಹಿಸಿದ್ದರು. ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.
'ನನ್ನ ಆಡಿಯೊವನ್ನು ತಿರುಚಲಾಗಿದೆ. ಆದರೂ ನಾನು ಬಹಿರಂಗ ಕ್ಷಮೆ ಕೇಳಿರುವುದಾಗಿ ಕೊರಟಕರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.