ನವದೆಹಲಿ: ಹಲವು ರಾಜ್ಯಗಳೊಂದಿಗೆ ಹರಡಿಕೊಂಡಿರುವ ಸಾಮ್ರಾಟ ಅಶೋಕನ ಶಿಲಾ ಶಾಸನಗಳಿರುವ ಸ್ಥಳಗಳು ಮತ್ತು ಚೌಸತ್ ಯೋಗಿನಿ ದೇವಾಲಯಗಳಿರುವ ಸ್ಥಳಗಳು ಸೇರಿದಂತೆ ಆರು ಸ್ಥಳಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಭಾರತದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ಈ ಸ್ಥಳಗಳನ್ನು ಮಾರ್ಚ್ 7ರಂದು ಸಂಭಾವ್ಯ ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೊದಲ್ಲಿನ ಭಾರತದ ಶಾಶ್ವತ ನಿಯೋಗವು ತಿಳಿಸಿದೆ. ಈ ಕುರಿತ ಹೇಳಿಕೆಯನ್ನು ತಡರಾತ್ರಿ 'ಎಕ್ಸ್'ನಲ್ಲಿ ಅದು ಪ್ರಕಟಿಸಿದೆ.
ಆರು ತಾಣಗಳ ಸೇರ್ಪಡೆಯಿಂದ ತಾತ್ಕಾಲಿಕ ಪಟ್ಟಿಯಲ್ಲಿರುವ ಭಾರತದ ತಾಣಗಳ ಸಂಖ್ಯೆ 62ಕ್ಕೆ ಏರಿದಂತಾಗಿದೆ. ಯುನೆಸ್ಕೊ ವಿಶ್ವಪರಂಪರಿಕ ತಾಣವನ್ನು ಘೋಷಿಸಲು ಈ ಪಟ್ಟಿಯಲ್ಲಿರುವ ತಾಣಗಳನ್ನು ಪರಿಶೀಲನೆ ನಡೆಸುತ್ತದೆ.
ತಾತ್ಕಾಲಿಕ ಪಟ್ಟಿಗೆ ಸೇರಿದ ತಾಣಗಳು:
ಛತ್ತೀಸಗಢದ ಕಾಂಗರ್ ಕಣಿವ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್ನಲ್ಲಿ ಇರುವ ಶಿಲಾಯುಗದ 'ಮೆನ್ಹಿರ್ಸ್', ಮೌರ್ಯರು ಆಡಳಿತ ನಡೆಸಿದ ಪ್ರದೇಶಗಳುದ್ದಕ್ಕೂ ಕಂಡುಬಂದಿರುವ ಅಶೋಕನ ಶಾಸನಗಳಿರುವ ಸ್ಥಳಗಳು (ಬಹು ರಾಜ್ಯಗಳಲ್ಲಿ ಹರಡಿದೆ), 'ಚೌಸತ್ ಯೋಗಿನಿ' ದೇಗುಲಗಳ ಸ್ಥಳಗಳು (ಬಹು ರಾಜ್ಯಗಳಲ್ಲಿ ಹರಡಿದೆ), ಉತ್ತರ ಭಾರತದಲ್ಲಿನ ಗುಪ್ತರ ಕಾಲದ ದೇಗುಲಗಳು (ಬಹು ರಾಜ್ಯಗಳಲ್ಲಿ ಹರಡಿದೆ) ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿನ ಬುಂದೇಲರ ಅರಮನೆ- ಕೋಟೆಗಳ ಸರಣಿಯು ತಾತ್ಕಾಲಿಕ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.
ಈ ಸ್ಥಳಗಳ ಸೇರ್ಪಡೆಯೊಂದಿಗೆ ಬಾರತದ ತಾತ್ಕಾಲಿಕ ಪಟ್ಟಿಯಲ್ಲಿರುವ ತಾಣಗಳ ಸಂಖ್ಯೆ 62ಕ್ಕೆ ಏರಿದಂತಾಗಿದೆ. ಪ್ರಸ್ತುತ ಭಾರತದಲ್ಲಿ 43 ತಾಣಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣದ ಗರಿಮೆ ಪಡೆದಿವೆ. ಇವುಗಳಲ್ಲಿ 35 ಸಾಂಸ್ಕೃತಿಕ, ಏಳು ನೈಸರ್ಗಿಕ ಮತ್ತು ಒಂದು ಮಿಶ್ರ ವರ್ಗದಲ್ಲಿ ಬರುತ್ತವೆ.