ನವದೆಹಲಿ: ಮೋಟಾರು ವಾಹನ ಕಾಯ್ದೆಯಡಿ ಪರಿಹಾರ ಪಡೆಯಲು ಹಲವಾರು ಅಪಘಾತಗಳಲ್ಲಿ ಒಂದೇ ವಾಹನವನ್ನು ಬಳಸಿ ವಂಚಿಸಲಾಗುತ್ತಿದೆ ಎಂಬ ವಿಮಾ ಕಂಪನಿಯ ದೂರಿನ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನೈಜವಾಗಿರದ ಕ್ಲೈಮುಗಳನ್ನು ನಿರಾಕರಿಸುವ ವಿಷಯದಲ್ಲಿ ವಿಮಾ ಕಂಪನಿಗಳನ್ನು ಶಕ್ತಿಹೀನವಾಗಿಸುವುದು ಸರಿಯಲ್ಲ ಎಂದಿರುವ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠ, ಒಡಿಶಾದ ವಿಮೆ ಸಂಬಂಧಿ ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಅಲ್ಲಿನ ಡಿಜಿಪಿಗೆ ನಿರ್ದೇಶನ ನೀಡಿದೆ.
ಅಪಘಾತ ವಿಮೆ ಪಾವತಿಸುವಂತೆ ಒಡಿಶಾ ಹೈಕೋರ್ಟ್ 2022ರ ಮೇ 9ರಂದು ನೀಡಿದ್ದ ತೀರ್ಪಿನ ವಿರುದ್ಧ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. 2017ರ ಅಕ್ಟೋಬರ್ 19ರಂದು ಅಪಘಾತ ಸಂಭವಿಸಿತ್ತು. ಕ್ಲೈಮ್ ಅರ್ಜಿ ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇ 7 ಬಡ್ಡಿಯೊಂದಿಗೆ ಪರಿಹಾರವಾಗಿ ₹40,42,162 ಪಾವತಿಸಲು ಹೈಕೋರ್ಟ್ ವಿಮಾ ಕಂಪನಿಗೆ ನಿರ್ದೇಶನ ನೀಡಿತ್ತು.
ವಿಮಾ ಕಂಪನಿಯ ಪರವಾಗಿ ಹಾಜರಾದ ವಕೀಲ ಎಚ್. ಚಂದ್ರಶೇಖರ್, 'ಅಪಘಾತದಲ್ಲಿ ಭಾಗಿಯಾಗಿದೆ ಎಂದು ಹೇಳಲಾದ ವಾಹನವು ಇತರ ನಾಲ್ಕು ಕ್ಲೈಮ್ಗಳಲ್ಲಿ ಭಾಗಿಯಾಗಿದೆ. ಅಪಘಾತದಲ್ಲಿ ಭಾಗಿಯಾಗದ ವಾಹನದ ದಾಖಲೆಗಳನ್ನು ಸಲ್ಲಿಸಿ ದುರುದ್ದೇಶದಿಂದ ವಿಮೆ ಪಡೆಯುವ ಯತ್ನ ಇದಾಗಿದೆ. ಇದೊಂದು ವಂಚನೆ' ಎಂದು ವಾದಿಸಿದರು.
'ಅಪರಿಚಿತ ವಾಹನವೊಂದು ತನ್ನ ಸಹೋದರನಿಗೆ ಡಿಕ್ಕಿ ಹೊಡೆದಿದೆ ಎಂದು ಮೃತನ ಸಹೋದರ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಎರಡು ದಿನಗಳ ಬಳಿಕ ಎಫ್ಐಆರ್ ದಾಖಲಿಸುವ ಸಂದರ್ಭದಲ್ಲಿ ಅಪಘಾತವೆಸಗಿದ ವಾಹನದ ಸಂಖ್ಯೆ ನೀಡಿದ್ದರು' ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ ನೀಡಿದ ಪೀಠವು ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿತು.