ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮಹಾಕುಂಭದ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಮಂಗಳವಾರ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಮಹಾಕುಂಭದ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನದಿಂದ ಎದ್ದುನಿಂತು ಪ್ರತಿಭಟನೆಗೆ ಮುಂದಾದರು.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವುಗಳ ಕುರಿತು ಸೇರಿಸಬೇಕೆಂದು ಒತ್ತಾಯಿಸಿದರು.
ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಮೊದಲಿಗೆ ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಲಾಯಿತು.
ಕಲಾಪ ಮತ್ತೆ ಆರಂಭವಾದಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಮ್ಮ ಸಚಿವಾಲಯದ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದರು.
ಜಲಶಕ್ತಿ ಸಚಿವಾಲಯಕ್ಕೆ ಅನುದಾನ ಬೇಡಿಕೆಗಳ ಕುರಿತು ಸದನವು ಚರ್ಚೆಯನ್ನು ಕೈಗೆತ್ತಿಕೊಂಡಾಗ, ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು. ಇದರಿಂದಾಗಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.
ಪ್ರಧಾನಿ ಮೋದಿ ಹೇಳಿದ್ದೇನು?
ಮಹಾಕುಂಭವು ದೇಶದಲ್ಲಿ ಏಕತೆಯ ಮನೋಭಾವವನ್ನು ಬಲಪಡಿಸಿದೆ ಮತ್ತು ಅಂತಹ ಬೃಹತ್ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕೆ ಇದೆಯೇ ಎಂದು ಪ್ರಶ್ನಿಸುತ್ತಿದ್ದವರಿಗೆ ಸೂಕ್ತ ಉತ್ತರ ನೀಡಿದೆ. ಮಹಾಕುಂಭದ ಯಶಸ್ಸು ಸರ್ಕಾರ ಮತ್ತು ಸಮಾಜದ ಅಸಂಖ್ಯಾತ ಜನರ ಕೊಡುಗೆಗಳ ಪರಿಣಾಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
'ಭಾರತದಲ್ಲಿ ಸುಮಾರು ಒಂದೂವರೆ ತಿಂಗಳು ಮಹಾಕುಂಭ ಮೇಳದ ಉತ್ಸಾಹವನ್ನು ನಾವು ಕಂಡಿದ್ದೇವೆ. ಅನುಕೂಲ ಮತ್ತು ಅನಾನುಕೂಲತೆಯನ್ನು ಮೀರಿ ಲಕ್ಷಾಂತರ ಭಕ್ತರು ಭಕ್ತಿಯಿಂದ ಒಟ್ಟುಗೂಡಿದ ರೀತಿ ನಮ್ಮ ದೊಡ್ಡ ಶಕ್ತಿಯಾಗಿದೆ. ಮಹಾಕುಂಭದ ಅತ್ಯಂತ ಪವಿತ್ರ ಕೊಡುಗೆ ಏಕತೆಯಾಗಿದೆ' ಎಂದರು.
ಮಹಾಕುಂಭವು ದೇಶದ ಪ್ರತಿಯೊಂದು ಪ್ರದೇಶ ಮತ್ತು ಮೂಲೆ ಮೂಲೆಯಿಂದ ಜನರು ಒಟ್ಟುಗೂಡಿದ ಒಂದು ಬೃಹತ್ ಕಾರ್ಯಕ್ರಮವಾಗಿತ್ತು. ಜನರು ತಮ್ಮ ಅಹಂಕಾರವನ್ನು ಬದಿಗಿಟ್ಟು 'ನಾನು' ಅಲ್ಲ, 'ನಾವು' ಎಂಬ ಭಾವನೆಯೊಂದಿಗೆ ಪ್ರಯಾಗ್ರಾಜ್ನಲ್ಲಿ ಒಟ್ಟುಗೂಡಿದರು. ವಿಶೇಷವಾಗಿ ಜಗತ್ತು ಅಸ್ತವ್ಯಸ್ತವಾಗಿದ್ದ ಸಮಯದಲ್ಲಿ ಮಹಾಕುಂಭದಲ್ಲಿ ನಡೆದ ಬೃಹತ್ ಏಕತೆಯ ಪ್ರದರ್ಶನವು ಭಾರತದ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಏಕತೆಯ ಮನೋಭಾವವು ಎಷ್ಟು ಪ್ರಬಲವಾಗಿದೆಯೆಂದರೆ ಅದನ್ನು ಮುರಿಯುವ ಯಾವುದೇ ಪ್ರಯತ್ನಗಳನ್ನು ಅದು ಛಿದ್ರಗೊಳಿಸುತ್ತದೆ. ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ ಎಂದು ನಾವು ಯಾವಾಗಲೂ ಹೇಳುತ್ತಾ ಬಂದಿದ್ದೇವೆ ಮತ್ತು ಮಹಾಕುಂಭದಲ್ಲಿ ಅದರ ಭವ್ಯ ಸ್ವರೂಪವನ್ನು ನಾವು ಅನುಭವಿಸಿದ್ದೇವೆ. ಇದನ್ನು ಶ್ರೀಮಂತಗೊಳಿಸುವುದು ನಮ್ಮ ಜವಾಬ್ದಾರಿ. ಸಂಗಮದ ದಡದಲ್ಲಿ ವಿವಿಧ ಭಾಷೆಗಳು ಮತ್ತು ಉಪಭಾಷೆಗಳನ್ನಾಡುವ ಜನರು 'ಹರ ಹರ ಗಂಗೆ' ಎಂದು ಜಪಿಸುತ್ತಿರುವುದು 'ಏಕ್ ಭಾರತ್ ಶ್ರೇಷ್ಠ ಭಾರತ್' ನ ಒಂದು ನೋಟವನ್ನು ನೀಡಿತು. ಇದು ಏಕತೆಯ ಭಾವನೆಯನ್ನು ಹೆಚ್ಚಿಸಿತು ಎಂದು ಅವರು ಹೇಳಿದರು.