ಮಧೂರು: ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಅಂಗವಾಗಿ ಕಾಡುಬಳ್ಳಿಯಿಂದ ತಯಾರಿಸಲಾದ ಪಾರಂಪರಿಕ ಬುಟ್ಟಿಗಳ ಸಮರ್ಪಣೆ ಶುಕ್ರವಾರ ನಡೆಯಿತು.
ಮಧೂರು ಕ್ಷೇತ್ರದಲ್ಲಿ ಮಾ. 27ರಿಂದ ಏ. 7ರ ವರೆಗೆ ಬ್ರಹ್ಮಕಲಶೋತ್ಸವದ ಜತೆಗೆ ನಡೆಯುವ ಮಹಾಗಣಪತಿಯ ಮೂಡಪ್ಪ ಸೇವೆಗೆ ಅಪ್ಪ ತುಂಬಿಸಿಡಲು ಈ ಬುಟ್ಟಿಗಳು ಬಳಕೆಯಾಗಲಿದೆ. ಉಕ್ಕಿನಡ್ಕ ಸನಿಹದ ದಂಬೆಮೂಲೆ ನಾರಾಯಣ ಭಟ್ ಅವರ ಹಿತ್ತಿಲಿಂದ ಕಾಡುಬೆತ್ತ ಸಂಗ್ರಹಿಸಿ, ಅವರ ಮನೆಯಲ್ಲೇ ಕೊರಗ ಸಮುದಾಯದವರು ಈ ಬುಟ್ಟಿಯನ್ನು ಹೆಣೆದು ನೀಡಿದ್ದಾರೆ. ಪ್ರತಿ ಬುಟ್ಟಿಗೆ 300ರೂ.ನಂತೆ ಹೆಣೆಯುವವರಿಗೆ ನೀಡಲಾಗಿದ್ದು, 400ರಷ್ಟು ಬುಟ್ಟಿಗಳನ್ನು ದೇಗುಲಕ್ಕೆ ಸಮರ್ಪಿಸಲಾಗಿದೆ. ಭಕ್ತಾದಿಗಳಿಂದ ಬುಟ್ಟಿಯೊಂದಕ್ಕೆ 300ರೂ.ನಂತೆ ದೇಣಿಗೆ ಸಂಗ್ರಹಿಸಿ ಬುಟ್ಟಿ ಹೆಣೆಯುವವರಿಗೆ ನೀಡಲಾಗಿದೆ.
ಉಕ್ಕಿನಡ್ಕ ಸನಿಹದ ಕಾರ್ಯಾಡು ನಿವಾಸಿಗಳಾದ ಬಟ್ಯ, ಚೋಮು, ಚನಿಯ, ಕಮಲ ಸೇರಿದಂತೆ ಅರು ಮಂದಿಯ ತಂಡ ಸುಮಾರು 22ದಿವಸಗಳ ಕಾಲ ಶ್ರಮವಹಿಸಿ ಬುಟ್ಟಿ ತಯಾರಿಸಿದೆ. ವಿಶೇಷ ಮೆರವಣಿಗೆ ಮೂಲಕ ಬುಟ್ಟಿಗಳನ್ನು ದೇಗುಲಕ್ಕೆ ಸಮರ್ಪಿಸಲಾಯಿತು. ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಬುಟ್ಟಿ ಹೆಣೆದವರಿಲ್ಲ
ಕಾಡಿನಿಂದ ಮರಬಳ್ಳಿ ತಂದು ಸುಮಾರು ಮೂರು ವಾರಗಳ ಕಾಲ ಬುಟ್ಟಿ ಹೆಣೆಯುವ ಕಾಯಕದಲ್ಲಿ ನಿರತರಾಗಿದ್ದ ಕಾರ್ಮಿಕರ್ಯಾರೂ ಸಮರ್ಪಣಾ ಕಾರ್ಯದಲ್ಲಿ ಭಾಗವಹಿಸಿರಲಿಲ್ಲ. ಸೀಮೆಯ ಬಲುದೊಡ್ಡ ಕಾರ್ಯಕ್ರಮವೊಂದರಲ್ಲಿ ಕೊರಗಸಮುದಾಯದವರು ಪಾರಂಪರಿಕ ಬುಟ್ಟಿ ಹೆಣೆಯುವ ಕಾಯಕದ ಮೂಲಕ ದೇಗುಲಕ್ಕೆ ಅಗತ್ಯವಿರುವ ಬುಟ್ಟಿಗಳನ್ನು ಹೆಣೆದು ನೀಡಿದ್ದರೂ, ಇವುಗಳನ್ನು ದೇಗುಲಕ್ಕೆ ಸಮರ್ಪಿಸುವ ಸಂದರ್ಭ ಸಮುದಾಯದವರನ್ನು ಸೇರಿಸಿಕೊಳ್ಳದಿರುವ ಬಗ್ಗೆ ಭಕ್ತಜನರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.