ನವದೆಹಲಿ: ಏರ್ ಇಂಡಿಯಾ ವಿಮಾನ ವಿಳಂಬವಾಗಿರುವುದಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
'ನಾವು ಪೈಲಟ್ಗಳಿಲ್ಲದ ಏರ್ ಇಂಡಿಯಾ ವಿಮಾನ ಹತ್ತಿದ್ದೇವೆ. ಆದರೆ, ಗಂಟೆಗಟ್ಟಲೆ ವಿಮಾನದಲ್ಲಿ ಕಾಯುತ್ತಿದ್ದೇವೆ.
ಪೈಲಟ್ಗಳಿಲ್ಲದ ವಿಮಾನಕ್ಕೆ ನೀವು ಪ್ರಯಾಣಿಕರನ್ನು ಏಕೆ ಹತ್ತಿಸುತ್ತೀರಿ' ಎಂದು ವಾರ್ನರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆ, 'ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹವಾಮಾನ ಸಂಬಂಧಿತ ಅಡಚಣೆಗಳಿಂದಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳ ವಿಮಾನಗಳ ಮಾರ್ಗ ಬದಲಾವಣೆ ಮತ್ತು ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು' ಎಂದು ಸ್ಪಷ್ಟನೆ ನೀಡಿದೆ.
ವಿಮಾನ ವಿಳಂಬಕ್ಕೆ ಸುಪ್ರಿಯಾ ಸುಳೆ ಕಿಡಿ
ಏರ್ ಇಂಡಿಯಾ ವಿಮಾನಗಳು ನಿರಂತರವಾಗಿ ವಿಳಂಬವಾಗುತ್ತಿರುವುದಕ್ಕೆ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಶನಿವಾರ ತೀವ್ರ ಆಕ್ರೋಶ ಹೊರಹಾಕಿದ್ದರು.
'ಏರ್ ಇಂಡಿಯಾ ವಿಮಾನಗಳು ನಿರಂತರವಾಗಿ ವಿಳಂಬವಾಗುತ್ತಿವೆ. ಇದು ಸ್ವೀಕಾರಾರ್ಹವಲ್ಲ! ನಾವು ದುಬಾರಿ ದರವನ್ನು ಪಾವತಿಸುತ್ತೇವೆ. ಆದರೆ, ವಿಮಾನಗಳು ಎಂದಿಗೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಇದರಿಂದ ವೃತ್ತಿಪರರು, ಮಕ್ಕಳು ಮತ್ತು ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಾಗರಿಕ ವಿಮಾನಯಾನ ಸಚಿವರು ಕೂಡಲೇ ಕ್ರಮ ಕೈಗೊಂಡು ಏರ್ ಇಂಡಿಯಾ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ಸುಪ್ರಿಯಾ ಸುಳೆ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ಈಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಭೋಪಾಲ್ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುರಿದ ಆಸನ ನೀಡಿದ್ದು, ತಮಗಾದ ತೊಂದರೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಯಾಣಿಕರಿಂದ ಪೂರ್ಣ ಟಿಕೆಟ್ ದರ ಪಡೆಯುವ ವಿಮಾನಯಾನ ಕಂಪನಿಯು ಕಳಪೆ ದರ್ಜೆಯ ಸೌಲಭ್ಯ ಒದಗಿಸಿದೆ. ಹಣಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸದಿರುವುದು ಅನೈತಿಕವಾದುದು. ಪ್ರಯಾಣಿಕರಿಗೆ ಮಾಡುವ ಮೋಸವಾಗಿದೆ ಎಂದು ತಮಗಾದ ಕಹಿ ಅನುಭವವನ್ನು ಅವರು 'ಎಕ್ಸ್'ನಲ್ಲಿ ಬರೆದುಕೊಂಡಿದ್ದರು.