ರಾಯ್ಪುರ: ಛತ್ತೀಸಗಢ ಅಬಕಾರಿ ಹಗರಣದ ತನಿಖೆಯ ಭಾಗವಾಗಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ಮಗ ಹಾಗೂ ಮತ್ತಿತರರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಶೋಧ ನಡೆಸಲಾಗುತ್ತಿದೆ.
ದರ್ಗ್ ಜಿಲ್ಲೆಯ ಭಿಲ್ಲೈನಲ್ಲಿರುವ ಚೈತನ್ಯ ಬಘೇಲ್ (ಭೂಪೇಶ್ ಪುತ್ರ) ಅವರಿಗೆ ಸಂಬಂಧಿಸಿದ ಸ್ಥಳಗಳು ಹಾಗೂ ಚೈತನ್ಯ ಅವರೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಲಕ್ಷ್ಮಿ ನಾರಾಯಣ್ ಬನ್ಸಲ್ ಅಲಿಯಾಸ್ ಪಪ್ಪು ಬನ್ಸಲ್ ಮತ್ತಿತರರ ನಿವಾಸಗಳು ಸೇರಿದಂತೆ ರಾಜ್ಯದ ಸುಮಾರು 14-15 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ರಾಜ್ಯದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2019-2022ರ ಅವಧಿಯಲ್ಲಿ ಅಬಕಾರಿ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಆರೋಪಿಗಳ ಸುಮಾರು ₹ 205 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇ.ಡಿ. ಈವರೆಗೆ ಮುಟ್ಟುಗೋಲು ಹಾಕಿಕೊಂಡಿದೆ.